ನಿರ್ಮಲಾ ಸೀತಾರಾಮನ್ರಿಗೆ ಸಿದ್ದರಾಮಯ್ಯ ಏಕವಚನ ಬಳಕೆ|ಸಿಎಂ ಕ್ಷಮೆಯಾಚನೆಗೆ ಮಹಿಳಾ ಮೋರ್ಚಾದಿಂದ ಪಟ್ಟು|ಶಿವಮೊಗ್ಗ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ
ಹೆಣ್ಣುಮಕ್ಕಳ ಬಗ್ಗೆ ಕೀಳಾಗಿ ಕಾಣುವುದು, ಸಂವಿಧಾನಿಕ ಹುದ್ದೆಗೆ ಗೌರವ ನೀಡದೇ ಮಾತನಾಡುವುದು ಕಾಂಗ್ರೆಸ್ ಪಕ್ಷದ ಸಂಸ್ಕೃತಿ ತೋರಿಸುತ್ತದೆ ಎಂದು ಬಿಜೆಪಿ ಮಹಿಳಾಮೋರ್ಚಾ ನಗರಾಧ್ಯಕ್ಷೆ ರಶ್ಮೀ ಶ್ರೀನಿವಾಸ್ ಆಕ್ರೋಶ ವ್ಯಕ್ತಪಡಿಸಿದರು.

ಕೇಂದ್ರ ಹಣಕಾಸು ಖಾತೆ ಸಚಿವೆ ನಿರ್ಮಲಾ ಸೀತಾರಾಮನ್ ಅವರ ಕುರಿತು ಅಗೌರವದಿಂದ ಸಂಭೋದಿಸಿದ ಸಿಎಂ ಸಿದ್ದರಾಮಯ್ಯ ಕೂಡಲೇ ಕ್ಷಮೆ ಯಾಚಿಸುವಂತೆ ಆಗ್ರಹಿಸಿ ಶಿವಮೊಗ್ಗ ಜಿಲ್ಲಾ ಬಿಜೆಪಿ ಮಹಿಳಾ ಮೋರ್ಚಾ ಸೋಮವಾರದಂದು ಪ್ರತಿಭಟನೆ ನಡೆಸಿತು.
ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಸೇರಿದ್ದ ಮಹಿಳಾ ಮೋರ್ಚಾ ಸದಸ್ಯರು, ಪ್ರಭಾವಿ ಖಾತೆ ನಿರ್ವಹಿಸುತ್ತಿರುವ ಕೇಂದ್ರ ಸಚಿವೆಗೆ ಏಕವಚನ ಪದ ಪ್ರಯೋಗಿಸಿರುವುದನ್ನ ತೀವ್ರವಾಗಿ ಖಂಡಿಸಿದರು.

ದೇಶದ ಹಣಕಾಸು ನೀತಿ ನಿರ್ಧರಿಸುವ ಮಹಿಳಾ ನಾಯಕಿಯ ಬಗ್ಗೆ ಹಗುರವಾಗಿ ಮಾತನಾಡುವುದನ್ನ ಮಹಿಳಾ ಸಮುದಾಯ ಸಹಿಸುವದಿಲ್ಲ ಎಂದು ಎಚ್ಚರಿಕೆ ನೀಡಿದರು.
ಹೆಣ್ಣುಮಕ್ಕಳ ಬಗ್ಗೆ ಕೀಳಾಗಿ ಕಾಣುವುದು, ಸಂವಿಧಾನಿಕ ಹುದ್ದೆಗೆ ಗೌರವ ನೀಡದೇ ಮಾತನಾಡುವುದು ಕಾಂಗ್ರೆಸ್ ಪಕ್ಷದ ಸಂಸ್ಕೃತಿ ತೋರಿಸುತ್ತದೆ ಎಂದು ಬಿಜೆಪಿ ಮಹಿಳಾಮೋರ್ಚಾ ನಗರಾಧ್ಯಕ್ಷೆ ರಶ್ಮೀ ಶ್ರೀನಿವಾಸ್ ಆಕ್ರೋಶ ವ್ಯಕ್ತಪಡಿಸಿದರು.

ಸಿಎಂ ಸಿದ್ದರಾಮಯ್ಯ, ದುರಹಂಕಾರದ ನಡೆಯನ್ನು ತಿದ್ದಿಕೊಂಡು ಕೂಡಲೇ ಸಾರ್ವಜನಿಕವಾಗಿ ಕ್ಷಮೆಯಾಚಿಸಬೇಕೆಂದು ಮಹಿಳಾ ಸಮುದಾಯದ ಪರವಾಗಿ ರಶ್ಮೀ ಶ್ರೀನಿವಾಸ್ ಆಗ್ರಹಿಸಿದರು. ಬಳಿಕ ತಹಶೀಲ್ದಾರ ಅವರ ಮೂಲಕ ಖಂಡನಾ ಪತ್ರ ಸಲ್ಲಿಸಲಾಯಿತು.
ಪ್ರತಿಭಟನೆಯಲ್ಲಿ ಬಿಜೆಪಿ ಜಿಲ್ಲಾ ಅಧ್ಯಕ್ಷ ಸಿ ಹೆಚ್ ಮಾಲತೇಶ್, ಪ್ರಧಾನ ಕಾರ್ಯದರ್ಶಿ ನಾಗರಾಜ್, ಮಹಿಳಾ ಮುಖಂಡರಾದ ಯಶೋಧಾ ವೈಷ್ಣವ್, ಮಂಗಳಾ ನಾಗೇಂದ್ರ, ಸುಮಾ ಭೂಪಾಳಂ, ಶಾಂತಾ ಸುರೇಂದ್ರ, ಸುರೇಖಾ ಮುರಳೀಧರ್, ಮತ್ತಿತರರು ಭಾಗವಹಿಸಿದ್ದರು.
ವರದಿ: ಸೌಮ್ಯ ರೆಡ್ಡಿ
ಬ್ಯುರೋ ಚೀಫ್
ನ್ಯೂಇಂಡಿಯಾ ಕನ್ನಡ
ಶಿವಮೊಗ್ಗ.






