CrimeDistrictShivamoggaSpecial Stories

ಶಿವಮೊಗ್ಗ: ತುಂಗಾನದಿಯಲ್ಲಿ ಯುವಕನ ಸಂಶಾಯಸ್ಪದ ಸಾವು|ಡಿವಿಎಸ್‌ ವಿದ್ಯಾರ್ಥಿ ಪ್ರೇಮಕುಮಾರ್‌ ಸಾವಿಗೆ ಕಾರಣ ಯಾರು?ಸ್ನೇಹಿತರ ಸುತ್ತ ಅನುಮಾನದ ಹುತ್ತ..?

ಮನೆಯಲ್ಲಿ ಇದ್ದ ನನ್ನ ಮಗನನ್ನು ಕರೆದುಕೊಂಡು ಹೋಗಿದ್ದ ಸ್ನೇಹಿತರೇ ಪ್ರೇಮ್‌ ಸಾವಿಗೆ ಕಾರಣ ಎಂದು ಪ್ರೇಮಕುಮಾರ್‌ನ ತಾಯಿ ಗೌರಮ್ಮ, ಶಿವಮೊಗ್ಗ ಗ್ರಾಮಾಂತರ ಪೊಲೀಸ್‌ ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

ಶಿವಮೊಗ್ಗ: ತುಂಗಾನದಿಯಲ್ಲಿ ಈಜಲು ಇಳಿದಿದ್ದ ವಿದ್ಯಾರ್ಥಿಯೊಬ್ಬ ಸಂಶಯಾಸ್ಪದ ರೀತಿಯಲ್ಲಿ ಸಾವನ್ನಪ್ಪಿರುವ ಘಟನೆ ಭಾನುವಾರದಂದು ಶಿವಮೊಗ್ಗ ತಾಲೂಕಿನ ಪಿಳ್ಳಂಗೆರೆಯಲ್ಲಿ ನಡೆದಿದೆ.

ಮೃತಪಟ್ಟ ದುರ್ದೈವಿಯನ್ನು ಶಿವಮೊಗ್ಗದ ಕಾಮಾಕ್ಷಿ ಬೀದಿಯ ನಿವಾಸಿ ಪ್ರೇಮಕುಮಾರ್‌ (17) ಎಂದು ಗುರುತಿಸಲಾಗಿದೆ. ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ‌ ದಾಖಲಿಸಿಕೊಂಡಿದ್ದಾರೆ.

ಭಾನುವಾರ ರಜೆ ಇದ್ದಿದ್ದರಿಂದ ಪ್ರೇಮಕುಮಾರ್‌ ಕಾಮಾಕ್ಷಿ ಬೀದಿಯಲ್ಲಿರುವ ತನ್ನ ಮನೆಯಲ್ಲಿ ಇದ್ದ. ಬೆಳಗ್ಗೆ 11.30 ರ ಸುಮಾರಿಗೆ ಆತನ ಸ್ನೇಹಿತ ರಾಜು (ಹೆಸರು ಬದಲಾಯಿಸಲಾಗಿದೆ) ಮನೆಗೆ ಬಂದಿದ್ದಾನೆ.

ಪಿಳ್ಳಂಗೆರೆ ಹತ್ತಿರ ಕುರಿಹುಡ್ಡಿ ಇದೆ. ರಂಗನಾಥಸ್ವಾಮಿ ದೇವಸ್ಥಾನದ ಬಳಿ ಇರುವ ಭೂತಪ್ಪನ ದೇವಸ್ಥಾನದಲ್ಲಿ ಪ್ರಸಾದ ಹಂಚುತ್ತಿದ್ದಾರೆ. ಸ್ನೇಹಿತರೆಲ್ಲರೂ ಕೂಡಿ ಹೋಗುತ್ತಿದ್ದೇವೆ.

ಬಳಿಕ ನೀರಿನಲ್ಲಿ ಆಟ ಆಡಿಕೊಂಡು ಬರೋಣ.. ಬಾ.. ಎಂದು ಪ್ರೇಮಕುಮಾರ್‌ನನ್ನು ಕರೆದುಕೊಂಡು ಹೋಗಿದ್ದಾನೆ. ಅದೇ ಕೊನೆ..ತಾಯಿಗೆ ಹೇಳಿ ಹೊರಟ ಪ್ರೇಮಕುಮಾರ್‌ ಮತ್ತೆ ಮನೆಗೆ ಬರಲೇ ಇಲ್ಲ.

ಅಂದುಕೊಂಡತೇ ಸ್ನೇಹಿತರೊಂದಿಗೆ ರಂಗನಾಥಸ್ವಾಮಿ ದೇವಸ್ಥಾನದ ಬಳಿ ಇರುವ ತುಂಗಾನದಿಯಲ್ಲಿ ದುರ್ದೈವಿ ಪ್ರೇಮಕುಮಾರ್‌ ತನ್ನ ಸ್ನೇಹಿತರೊಂದಿಗೆ ಆಟವಾಡಲು ನೀರಿಗೆ ಇಳಿದಿದ್ದಾನೆ.

ಆಗ ಬರೋಬ್ಬರಿ ಮಧ್ಯಾಹ್ನ 1.30 ಆಗಿತ್ತು ಎನ್ನಲಾಗಿದೆ. ಆಟವಾಡುತ್ತಿದ್ದ ಪ್ರೇಮಕುಮಾರ್‌ ಸ್ವಲ್ಪ ಮುಂದಕ್ಕೆ ಹೋಗಿದ್ದಾನೆ. ಅಷ್ಟೇ! ಏಕಾಏಕಿ ನೀರಿನಲ್ಲಿ ಮುಳಗಿದ್ದಾನೆ ಪ್ರೇಮಕುಮಾರ್‌.

ಏನಾಯಿತು ಅನ್ನುಕೊಳ್ಳವಷ್ಟರಲ್ಲಿ ಪ್ರೇಮಕುಮಾರ್‌ ಕಾಣಿಸದಂತಾಗಿದ್ದಾನೆ. ಆತನ ಜೊತೆ ಸ್ನೇಹಿತರು ಸ್ಥಳೀಯರಿಗೆ ವಿಷಯ ಮುಟ್ಟಿಸಿದ್ದಾರೆ.

ಭಾನುವಾರ ಮಧ್ಯಾಹ್ನ 2.30ಗಂಟೆ ಸುಮಾರಿಗೆ ಪಕ್ಕದ ಮನೆಯವರೇ ಆದ ಪ್ರೇಮಕುಮಾರ್‌ನ ಸ್ನೇಹಿತ ರಾಜುನ ತಾಯಿ ಹೊನ್ನಮ್ಮ ಎಂಬುವರು ಪ್ರೇಮಕುಮಾರ್‌ನ ಮನೆಗೆ ಬಂದು, ಯಾರೋ ನದಿಯಲ್ಲಿ ಮುಳುಗಿದ್ದಾರೆ ಬನ್ನಿ ನೋಡಿಕೊಂಡು ಬರೋಣ ಎಂದು ಪ್ರೇಮಕುಮಾರ್‌ನ ತಾಯಿ ಗೌರಮ್ಮ ಅವರನ್ನು ಕರೆದಿದ್ದಾರೆ.

ಅದರಂತೆ ಮಧ್ಯಾಹ್ನ 3.30 ರ ಸುಮಾರಿಗೆ ಪಿಳ್ಳಂಗೆರೆಯ ರಂಗನಾಥ್‌ಸ್ವಾಮಿ ದೇವಸ್ಥಾನದ ಹಿಂಭಾಗದಲ್ಲಿರುವ ತುಂಗಾನದಿ ಬಳಿ ಬಂದಾಗ, ಅಲ್ಲಿ ಸ್ಥಳಿಯ ಜನರು ಮುಳಗಿದ್ದ ಪ್ರೇಮಕುಮಾರ್‌ನನ್ನು ಮೇಲೆಕ್ಕೇತ್ತಿದ್ದಾರೆ.

ಮಗನ ಮೃತದೇಹವನ್ನು ಗೌರಮ್ಮ ಗುರುತಿಸಿದ್ದಾರೆ. ದುಃಖದ ನಡುವೆಯು ನನ್ನ ಮಗ ಬದುಕಿದ್ದಾನೆ ಎಂದು ಗೌರಮ್ಮ ಮಗನನ್ನು ಮೆಗ್ಗಾನ್‌ ದವಾಖಾನೆಗೆ ಕರೆದುಕೊಂಡು ಬಂದಿದ್ದಾರೆ. ಆದರೆ ಪ್ರೇಮಕುಮಾರ್‌ ಮೃತಪಟ್ಟಿದ್ದಾನೆ ಎಂದು ವೈದ್ಯರು ತಿಳಿಸಿದ್ದಾರೆ.

ಮನೆಯಲ್ಲಿ ಇದ್ದ ನನ್ನ ಮಗನನ್ನು ಕರೆದುಕೊಂಡು ಹೋಗಿದ್ದ ಸ್ನೇಹಿತರೇ ಪ್ರೇಮ್‌ ಸಾವಿಗೆ ಕಾರಣ ಎಂದು ಪ್ರೇಮಕುಮಾರ್‌ನ ತಾಯಿ ಗೌರಮ್ಮ, ಶಿವಮೊಗ್ಗ ಗ್ರಾಮಾಂತರ ಪೊಲೀಸ್‌ ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

ನನ್ನ ಮಗ ಪ್ರೇಮ್‌ ಮಾತ್ರ ನೀರಿನಲ್ಲಿ ಮುಳುಗಿದ್ದಾನೆ. ಆತನನ್ನು ಬಚಾವು ಮಾಡಲು ಆತನ ಸ್ನೇಹಿತರು ಪ್ರಯತ್ನಿಸಿಲ್ಲ ಎಂದು ಹೇಳಿದ್ದಾರೆ.

ನನ್ನ ಮಗನ ಸಾವಿನ ಹಿಂದೆ ಆತನ ಸ್ನೇಹಿತರ ಮೇಲೆ ಅನುಮಾನವಿದ್ದು, ಸೂಕ್ತ ತನಿಖೆ ನಡೆಸಿ, ನ್ಯಾಯ ದೊರಕಿಸಿ ಕೊಡಬೇಕೆಂದು ಗೌರಮ್ಮ ನೀಡಿರುವ ದೂರಿನಲ್ಲಿ ಮನವಿ ಮಾಡಿದ್ದಾರೆ.

ಗೌರಮ್ಮ ನೀಡಿದ ದೂರಿನ ಹಿನ್ನೆಲೆಯಲ್ಲಿ ತನಿಖೆ ಕೈಗೊಂಡಿರುವ ಪೊಲೀಸರು ಪ್ರೇಮಕುಮಾರ್‌ನ ಸ್ನೇಹಿತರ ವಿಚಾರಣೆ ನಡೆಸಿದ್ದಾರೆ.

Follow Us

Leave a Reply

Your email address will not be published. Required fields are marked *

Back to top button