ಶಿವಮೊಗ್ಗ ಮಹಾನಗರಪಾಲಿಕೆ ಚುನಾವಣೆ ವಿಚಾರ|ಕಾಂಗ್ರೆಸ್ ಸರ್ಕಾರದಿಂದ ಸುಪ್ರೀಂ ಆದೇಶ ಉಲ್ಲಂಘನೆ|ಕೋರ್ಟಿಗೆ ಹೋಗಲು ನಿರ್ಧಾರ-ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ..
ಜನಪ್ರತಿನಿಧಿಗಳಿಲ್ಲದೆ ಪಾಲಿಕೆಯಲ್ಲಿ ಅಧಿಕಾರಿಗಳ ದುರಾಡಳಿತದಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದ್ದು ಯಾವುದೇ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿಲ್ಲ ಎಂದು ಕೆ.ಎಸ್.ಈಶ್ವರಪ್ಪ ಆರೋಪಿಸಿದರು.

ಶಿವಮೊಗ್ಗ: ಮಹಾನಗರ ಪಾಲಿಕೆಗೆ ಚುನಾವಣೆ ನಡೆಸಲು ಮುಂದಾಗಬೇಕು ಎಂದು ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಪಾಲಿಕೆಯಲ್ಲಿ ಚುನಾಯಿತ ಜನಪ್ರತಿನಿಧಿಗಳಿಲ್ಲದೆ ಎರಡು ವರ್ಷ ಕಳೆದಿದ್ದು, ಸರ್ಕಾರ ಕೂಡಲೇ ವಾರ್ಡ್ ಮೀಸಲಾತಿ ಪಟ್ಟಿ ಪ್ರಕಟಿಸಿಬೇಕು ಇಲ್ಲವಾದಲ್ಲಿ ನ್ಯಾಯಾಲಯದ ಕದ ತಟ್ಟುವದಾಗಿ ಅವರು ಹೇಳಿದ್ದಾರೆ.
ಜನಪ್ರತಿನಿಧಿಗಳಿಲ್ಲದೆ ಪಾಲಿಕೆಯಲ್ಲಿ ಅಧಿಕಾರಿಗಳ ದುರಾಡಳಿತದಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದ್ದು ಯಾವುದೇ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿಲ್ಲ ಎಂದು ಕೆ.ಎಸ್.ಈಶ್ವರಪ್ಪ ಆರೋಪಿಸಿದರು.

ರಾಜ್ಯ ಚುನಾವಣಾ ಆಯುಕ್ತ ಜಿ.ಎಸ್.ಸಂಗ್ರೇಶಿ ಶಿವಮೊಗ್ಗಕ್ಕೆ ಕಳೆದ ವರ್ಷ ಭೇಟಿ ನೀಡಿದಾಗ ರಾಷ್ಟ್ರಭಕ್ತರ ಬಳಗದ ನಿಯೋಗ ಅವರನ್ನು ಭೇಟಿ ಮಾಡಿ ಪಾಲಿಕೆಗೆ ಚುನಾವಣೆ ನಡೆಸುವಂತೆ ಮನವಿ ಮಾಡಿತ್ತು.
ಆಗ ಆಯುಕ್ತರು ತಿಳಿಸಿದಂತೆ ಶಿವಮೊಗ್ಗ ನಗರದ ಮತದಾರರ ಪಟ್ಟಿ ಪರಿಷ್ಕರಣೆ ಪ್ರಕ್ರಿಯೆ ಪೂರ್ಣಗೊಂಡಿದ್ದು ಸರ್ಕಾರದಿಂದ ವಾರ್ಡ್ ಮೀಸಲಾತಿಯ ಪರಿಷ್ಕೃತ ಪಟ್ಟಿಗಾಗಿ ಕಾಯುತ್ತಿದ್ದೇವೆ ಎಂದು ಹೇಳಿದ್ದರು.
ರಾಜ್ಯ ಚುನಾವಣಾ ಆಯುಕ್ತರು ಹೇಳಿರುವಂತೆ ರಾಜ್ಯ ಸರ್ಕಾರವು ಅವಧಿ ಮುಗಿದ ಪಾಲಿಕೆಗಳ ಪರಿಷ್ಕೃತ ಕ್ಷೇತ್ರ ಹಾಗೂ ವಾರ್ಡ್ ಮೀಸಲಾತಿ ಅಧಿಸೂಚನೆ ಹೊರಡಿಸದೇ ಇದ್ದಾಗ ಸುಪ್ರೀಂಕೋರ್ಟ್ ಆದೇಶದಂತೆ (2006 ರ ಕಿಶನ್ ಸಿಂಗ್ ಮತ್ತು ರಾಜಸ್ಥಾನ ಸರ್ಕಾರದ ನಡುವಿನ ಪ್ರಕರಣ) ಹಿಂದಿನ ಮೀಸಲಾತಿಗೆ ಅನುಗುಣವಾಗಿ ಚುನಾವಣೆ ನಡೆಸಲು ಕೋರ್ಟ ಮೊರೆ ಹೋಗಬೇಕಾಗುತ್ತದೆ ಎಂದು ಕೆ.ಎಸ್.ಈಶ್ವರಪ್ಪ ಹೇಳಿದರು.
ಕಾಂಗ್ರೆಸ್ ಸರ್ಕಾರಕ್ಕೆ ಮಹಾನಗರ ಪಾಲಿಕೆ ಚುನಾವಣೆ ನಡೆಸಲು ಸೋಲಿನ ಭಯ ಕಾಡುತ್ತಿರಬಹುದು ಹೀಗಾಗಿಯೇ ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಸದೇ ಮುಂದೂಡುತ್ತಿದೆ ಸಿಎಂ ಸಿದ್ದರಾಮಯ್ಯ ಸರ್ಕಾರದ ವಿರುದ್ದ ಕೆ.ಎಸ್ಈಶ್ವರಪ್ಪ ಕಿಡಿಕಾರಿದರು.
ಲೋಕಾಯುಕ್ತ ಅಧಿಕಾರಿಗಳ ಮೇಲೆ ಈಶ್ವರಪ್ಪ ಕಿಡಿ|
ಲೋಕಯುಕ್ತ ಅಧಿಕಾರಿಗಳ ಕಾರ್ಯನಿರ್ವಹಣೆ ಬಗ್ಗೆ ಮಾಜಿ ಡಿಸಿಎಂ ಕೆ.ಎಸ್ಈಶ್ವರಪ್ಪ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ನೆಪಮಾತ್ರಕ್ಕೆ ಮಹಾನಗರಪಾಲಿಕೆಗೆ ದಿಡೀರ್ ಭೇಟಿ ನೀಡುವ ಅಧಿಕಾರಿಗಳು, ಅಲ್ಲಿನ ವ್ಯವಸ್ಥೆ ಲೆಕ್ಕಪತ್ರ ನಿರ್ವಹಣೆ ಲೋಪದೋಷಗಳ ಬಗೆಗಿನ ಯಾವ ವರದಿಯನ್ನೂ ಈವರೆಗೆ ಬಹಿರಂಗಪಡಿಸದೇ ಇರುವುದು ಅನುಮಾನ ಮೂಡಿಸುತ್ತದೆ.
ಯಾವ ಪುರುಷಾರ್ಥಕ್ಕೆ ಪಾಲಿಕೆಗೆ ಲೋಕಾಯುಕ್ತ ಅಧಿಕಾರಿಗಳು ಭೇಟಿ ನೀಡಿದ್ದು ಗೊತ್ತಿಲ್ಲ ಬಹುಶಃ ಟೀ ಕುಡಿಯೋದಕ್ಕೆ ಹೋಗಿರಬಹುದು ಎಂದು ಖಾರವಾಗಿ ಪ್ರತಿಕ್ರಿಯಿಸಿದರು.
ರಾಷ್ಟ್ರಭಕ್ತ ಬಳಗದ ಕೆ.ಇ.ಕಾಂತೇಶ್, ಇ ವಿಶ್ವಾಸ್, ವಕೀಲರಾದ ಲೋಕೇಶ್, ಕುಬೇರಪ್ಪ ಮತ್ತಿತರರು ಉಪಸ್ಥಿತರಿದ್ದರು.
ವರದಿ: ಸೌಮ್ಯ ರೆಡ್ಡಿ
ಬ್ಯುರೋ ಚೀಫ್
ನ್ಯೂಇಂಡಿಯಾ ಕನ್ನಡ
ಶಿವಮೊಗ್ಗ.

.







