ಶಿವಮೊಗ್ಗ-ಭದ್ರಾವತಿಯಲ್ಲಿ 43 ಕೋಟಿರೂ.ವೆಚ್ಚದಲ್ಲಿ 15 ಕೆರೆಗಳ ಹೈಟೆಕ್ ಅಭಿವೃದ್ಧಿ|ಹೊಸದಾಗಿ ವಸತಿ ಬಡಾವಣೆ ನಿರ್ಮಿಸಲು ಪ್ರಸ್ತಾವನೆ-ಹೆಚ್ ಎಸ್ ಸುಂದರೇಶ್
ಗೋಪಿಶೆಟ್ಟಿ ಗ್ರಾಮದ ವಿವಿಧ ಸರ್ವೇ ನಂ.ಗಳಲ್ಲಿ ಒಟ್ಟು 3 ಎಕರೆ ಪ್ರದೇಶದಲ್ಲಿ ವಸತಿ ಬಡಾವಣೆ ನಿರ್ಮಿಸಲು ವಿನ್ಯಾಸ ನಕ್ಷೆಗೆ ತಾಂತ್ರಿಕ ಅನುಮೋದನೆ ಪಡೆಯಲು ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಹೆಚ್.ಎಸ್.ಸುಂದರೇಶ್ ತಿಳಿಸಿದರು.

ಶಿವಮೊಗ್ಗ: 43 ಕೋಟಿರೂ. ವೆಚ್ಚದಲ್ಲಿ 15 ಕೆರೆಗಳನ್ನು ಸೂಡಾ ವ್ಯಾಪ್ತಿಯಲ್ಲಿ ಅಭಿವೃದ್ದಿಪಡಿಸಲಾಗುತ್ತಿದೆ ಎಂದು ಶಿವಮೊಗ್ಗ-ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಹೆಚ್.ಎಸ್.ಸುಂದರೇಶ್ ಹೇಳಿದ್ದಾರೆ.
ಬುಧವಾರದಂದು ಆಲ್ಕೊಳ ಗ್ರಾಮದ ಸರ್ವೇ ನಂ 110 ರ ಕೆರೆ ಪ್ರದೇಶದಲ್ಲಿ ಕೆರೆ ಅಭಿವೃದ್ಧಿ ಕಾಮಗಾರಿಗಳ ವೀಕ್ಷಣೆ ಮಾಡಿದ ನಂತರ ಅವರು ಮಾತನಾಡಿದರು.


ಶಿವಮೊಗ್ಗ ಹಾಗೂ ಭದ್ರಾವತಿ ವ್ಯಾಪ್ತಿಯಲ್ಲಿ ಕರೆಗಳ ಸಮಗ್ರಅಭಿವೃದ್ಧಿಗೆ ಈಗಾಗಲೇ ಚಾಲನೆ ನೀಡಲಾಗಿದೆ ಎಂದು ತಿಳಿಸಿದರು. ಹಾಲಿ ಇರುವ ಕೆರೆಯಲ್ಲಿನ ಹೂಳು ತೆಗೆಸಿ, ಸುತ್ತಲೂ ಬೇಲಿ ಹಾಕಿಸಿ, ಬಂಡಿಂಗ್ ಮಾಡುವುದು ಸೇರಿದಂತೆ ಕೆರೆ ಸುತ್ತಲೂ ಗಿಡಗಳನ್ನು ನೆಡಲಾಗುವುದು ಎಂದು ಹೆಚ್.ಎಸ್.ಸುಂದರೇಶ್ ಹೇಳಿದರು.

ಉದ್ಯಾನವನ ಮಾದರಿಯಲ್ಲಿ ಮಕ್ಕಳ ಆಟಿಕೆಗಳನ್ನು ಅಳವಡಿಸಲಾಗುವುದು ಎಂದರು. ಇನ್ನು ಚರಂಡಿ ನೀರು ಕೆರೆಗಳಿಗೆ ಬರುವುದನ್ನು ತಪ್ಪಿಸಲು ಕ್ರಮ ವಹಿಸಲಾಗುವುದು. ಕೆಲವು ಕೆರೆಗಳನ್ನು ಐಲ್ಯಾಂಡ್ ಮಾದರಿಯಲ್ಲಿ ಅಭಿವೃದ್ಧಿಪಡಿಸಲು ನಿರ್ಧರಿಸಲಾಗಿದೆ ಎಂದು ಹೆಚ್.ಎಸ್.ಸುಂದರೇಶ್ ತಿಳಿಸಿದರು.
ಕೆರೆಗಳ ಅಭಿವೃದ್ದಿಯಿಂದ ಪರಿಸರ ಸಂರಕ್ಷಣೆಯೊಂದಿಗೆ ಅಂತರ್ಜಲ ಮಟ್ಟವೂ ಹೆಚ್ಚಲಿದೆ. ವಾತಾವರಣವೂ ಉತ್ತಮವಾಗಿರಲಿದೆ ಎಂದು ಅವರು ಅಭಿಪ್ರಾಯಪಟ್ಟರು.

ಕೆರೆ ಅಭಿವೃದ್ದಿ ಟೆಂಡರ್ ಆದ ಕಾಮಗಾರಿಗಳು|
ಶಿವಮೊಗ್ಗ ಹಾಗೂ ಭದ್ರಾವತಿ ವ್ಯಾಪ್ತಿಯಲ್ಲಿ ಒಟ್ಟು 15 ಕೆರೆಗಳನ್ನುಅಭಿವೃದ್ಧಿಪಡಿಸಲು ಗುರುತಿಸಲಾಗಿದೆ ಎಂದು ತಿಳಿಸಿದ ಹೆಚ್.ಎಸ್.ಸುಂದರೇಶ್, ರೂ.3.12 ಕೋಟಿ ವೆಚ್ಚದಲ್ಲಿ ಆಲ್ಕೊಳದ ಸರ್ವೆ ನಂ 73 ರಲ್ಲಿ 1 ಕೆರೆ, ನವುಲೆಯ ಸ.ನಂ 110 ಮತ್ತು 88 ರಲ್ಲಿ 2 ಕೆರೆಗಳು,
ಮಲ್ಲಿಗೇನಹಳ್ಳಿಯ ಸ.ನಂ 30 ರಲ್ಲಿ 1 ಕೆರೆ, ರೂ.2.24 ಕೋಟಿ ವೆಚ್ಚದಲ್ಲಿ ಬೊಮ್ಮನಕಟ್ಟೆ ಗ್ರಾಮದ ಸ.ನಂ.102 ರಲ್ಲಿ 2 ಎಕರೆ 11 ಗುಂಟೆ ವಿಸ್ತೀರ್ಣದ ಕೆರೆ, ಆಲ್ಕೊಳ ಗ್ರಾಮದ ಸ.ನಂ 5 14 ಎಕರೆ 9 ಗು. ವಿಸ್ತೀರ್ಣದ 1 ಕೆರೆ, ಕಾಶಿಪುರ ಸ.ನಂ 62ರಲ್ಲಿ 7 ಎ 32 ಗು. ವಿಸ್ತೀರ್ಣದ 01 ಕೆರೆ,
ಮಲ್ಲಿಗೇನಹಳ್ಳಿ ಗ್ರಾಮದ ಸ.ನಂ.25 ರಲ್ಲಿ 4 ಎಕರೆ 24 ಗುಂಟೆ, ಮತ್ತೂರು ಗ್ರಾಮದ ಸ.ನಂ.793 ರಲ್ಲಿ 1 ಕೆರೆ, ಭದ್ರಾವತಿ ತಾಲ್ಲೂಕಿನ ಜನ್ನಾಪುರ ಗ್ರಾಮದ ಸ.ನಂ 70 ರಲ್ಲಿ 45 ಎಕರೆ 20 ಗುಂಟ 1 ಕೆರೆ, ಭದ್ರಾವತಿ ತಾಲ್ಲೂಕಿನ ಉಜ್ಜಯನಿಪುರ ಸ.ನಂ.13 ರಲ್ಲಿ 6 ಎಕರೆ 18 ಗುಂಟೆ ಯಲ್ಲಿ 1 ಕೆರೆ ಸೇರಿ ಒಟ್ಟು 10 ಕೆರೆಗಳ ಅಭಿವೃದ್ದಿಗೆ ಈಗಾಗಲೇ ಟೆಂಡರ್ ಆಹ್ವಾನಿಸಲಾಗಿದೆ ಎಂದು ತಿಳಿಸಿದರು.
ಇನ್ನು ದೇವಕಾತಿಕೊಪ್ಪ ಗ್ರಾಮದ ಸ.ನಂ 47 ರಲ್ಲಿ 22 ಎ 30 ಗು. 01 ಕೆರೆ, ಚನ್ನಮುಂಬಾಪುರ ಗ್ರಾಮ ಸ.ನಂ.11 ರಲ್ಲಿ 10 ಎ 23 ಗು, ಬೊಮ್ಮನಕಟ್ಟೆ ಸ.ನಂ.114 ರಲ್ಲಿ 24 ಎ 14 ಗುಂಟೆಯಲ್ಲಿ 01, ಆಲ್ಕೊಳ ಗ್ರಾಮದ ಸ.ನಂ 10 ರಲ್ಲಿ 1 ಎ 2 ಗುಂಟೆಯಲ್ಲಿ 01, ಭದ್ರಾವತಿ ತಾಲ್ಲೂಕಿನ ಹೊಸೂರು-ಸಿದ್ದಾಪುರ ಗ್ರಾಮದ ಸ.ನಂ 110 ರಲ್ಲಿ 24 ಎ 19 ಗುಂಟೆಯಲ್ಲಿ 01 ಕೆರೆ ಒಟ್ಟು 5 ಕೆರೆಗಳ ಅಭಿವೃದ್ಧಿ ಕಾಮಗಾರಿಗಳು ತಾಂತ್ರಿಕ ಮಂಜೂರಾತಿಗೆ ಸಲ್ಲಿಕೆಯಾಗಿವೆ ಎಂದು ತಿಳಿಸಿದರು.

ಸೂಡಾ ವತಿಯಿಂದ ಕೈಗೊಳ್ಳಲು ಉದ್ದೇಶಿಸಿರುವ ಪ್ರಾಧಿಕಾರದ ಮಾಲೀಕತ್ವದ ನಿದಿಗೆ ಗ್ರಾಮದ ಸ.ನಂ25 ರ 3 ಎಕರೆ ಪ್ರದೇಶದಲ್ಲಿ ವಸತಿ ಬಡಾವಣೆಯ ಅಭಿವೃದ್ಧಿ ಕಾಮಗಾರಿಯ ಅಂದಾಜು ಪಟ್ಟಿಗೆ ಆಡಳಿತಾತ್ಮಕ ಅನುಮೋದನೆ ಪಡೆಯಲು ಆಯುಕ್ತಾಲಯಕ್ಕೆ ಸಲ್ಲಿಸಲಾಗಿದೆ ಎಂದು ಹೆಚ್.ಎಸ್.ಸುಂದರೇಶ್ ಹೇಳಿದರು.
ಆಲ್ಕೋಳ ಕಲ್ಯಾಣಿ ಕಾಯಕಲ್ಪಕ್ಕೆ ನಿವಾಸಿಗಳ ಮನವಿ|

ಆಲ್ಕೊಳದ ಕಲ್ಯಾಣಿಗೂ ಕಾಯಕಲ್ಪ ನೀಡುವಂತೆ ಪ್ರಿಯದರ್ಶಿನಿ ಬಡಾವಣೆ ನಿವಾಸಿಗಳು ಹೆಚ್.ಎಸ್.ಸುಂದರೇಶ್ ಅವರಿಗೆ ಅಹವಾಲು ಸಲ್ಲಿಸಿದರು. ಗಿಡಗಂಟಿಗಳಿ ಬೆಳೆದು ಸೂಕ್ತ ನಿರ್ವಹಣೆ ಇಲ್ಲವಾಗಿದೆ ಎಂದು ದೂರು ಸಲ್ಲಿಸಿದರು.
ಮನವಿ ಆಲಿಸಿದ ಸೂಡಾ ಅಧ್ಯಕ್ಷ ಹೆಚ್.ಎಸ್.ಸುಂದರೇಶ್, ಕಲ್ಯಾಣಿಯನ್ನು ಸ್ವಚ್ಚಗೊಳಿಸಿ ಸುಂದರ ವಾಕಿಂಗ್ ಪಾಥ್ ಮತ್ತು ಜಿಮ್ ಮಕ್ಳಳ ಆಟಿಕೆ ಅಳವಡಿಸಿ ಅಭಿವೃದ್ದಿಪಡಿಸುವುದಾಗಿ ನಿವಾಸಿಗಳಿಗೆ ಭರವಸೆ ನೀಡಿದರು.

ಇದೇ ವೇಳೆ ಸುತ್ತಮುತ್ತಲ ಬಡಾವಣೆಯ ಕಲುಷಿತ ನೀರು ಆಲ್ಕೋಳ ಕೆರೆಗೆ ಸೇರ್ಪಡೆಯಾಗುತ್ತಿದೆ. ಸುತ್ತಮುತ್ತಲ ನಿವಾಸಿಗಳು ಕೆರೆಯ ಜಾಗದಲ್ಲಿ ಮೃತ ದೇಹಹೂಳಲು ಬಳಸುತ್ತಿದ್ದಾರೆ.
ಇದಕ್ಕೆಲ್ಲ ಕಡಿವಾಣ ಹಾಕಿ ಕೆರೆಯನ್ನ ಸುಂದರಗೊಳಿಸಿಕೊಡುವಂತೆ ಅಲ್ಲಿನ ಐಶ್ವರ್ಯ ಎನ್ ಕ್ಲೇವ್ ನಿವಾಸಿಗಳ ಸಂಘ ಸೂಡಾ ಅಧ್ಯಕ್ಷರಿಗೆ ಮನವಿ ಮಾಡಿತು.
ಗೋಪಿಶೆಟ್ಟಿ ಗ್ರಾಮದಲ್ಲಿ ವಸತಿ ಬಡಾವಣೆ|
ಗೋಪಿಶೆಟ್ಟಿ ಗ್ರಾಮದ ವಿವಿಧ ಸರ್ವೇ ನಂ.ಗಳಲ್ಲಿ ಒಟ್ಟು 3 ಎಕರೆ ಪ್ರದೇಶದಲ್ಲಿ ವಸತಿ ಬಡಾವಣೆ ನಿರ್ಮಿಸಲು ವಿನ್ಯಾಸ ನಕ್ಷೆಗೆ ತಾಂತ್ರಿಕ ಅನುಮೋದನೆ ಪಡೆಯಲು ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಹೆಚ್.ಎಸ್.ಸುಂದರೇಶ್ ತಿಳಿಸಿದರು.
ನಿದಿಗೆ ಹೋಬಳಿ ಊರಗಡೂರು ಗ್ರಾಮದ ಉದ್ದೇಶಿತ ವಸತಿ ಬಡಾವಣೆಯಲ್ಲಿ ಸುಮಾರು 4 ಎಕರೆ ವಿಸ್ತೀರ್ಣದಲ್ಲಿ ವಸತಿ ಸಮುಚ್ಚಯ ನಿರ್ಮಾಣ ಸಂಬಂಧ ಪೂರ್ವಾನುಮತಿಗೆ ಆಯುಕ್ತಾಲಯಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದರು.
ಭದ್ರಾವತಿ ತಾಲ್ಲೂಕಿನ ಕಸಬಾ ಗ್ರಾಮದಲ್ಲಿ ಒಟ್ಟು 32 ಎಕರೆ 21 ಗುಂಟೆ ಪ್ರದೇಶದಲ್ಲಿ ವಸತಿ ಬಡಾವಣೆ ನಿರ್ಮಿಸಲು ವಿನ್ಯಾಸ ನಕ್ಷೆಗೆ ತಾಂತ್ರಿಕ ಅನುಮೋದನೆ ಪಡೆಯಲು ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಮಾಹಿತಿ ನೀಡಿದರು.
50 ಪಾರ್ಕ್ಗಳ ಅಭಿವೃದ್ದಿ|
ಇತ್ತೀಚೆಗೆ ಶಿವಮೊಗ್ಗದಲ್ಲಿ ಉಷ್ಣಾಂಶ ಹೆಚ್ಚುತ್ತಿದ್ದು, ನಗರವನ್ನು ಹಸಿರನ್ನಾಗಿ ಇಟ್ಟುಕೊಳ್ಳುವುದು ಅತಿ ಅವಶ್ಯಕವಾಗಿದೆ ಎಂದ ಹೆಚ್.ಎಸ್.ಸುಂದರೇಶ್, ಈ ನಿಟ್ಟಿನಲ್ಲಿ ಪಾರ್ಕ್ಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ ಎಂದು ತಿಳಿಸಿದರು. ಈ ಹಿಂದೆ 40 ಪಾರ್ಕ್ಗಳನ್ನು ಅಭಿವೃದ್ಧಿಪಡಿಸಲಾಗಿತ್ತು. ಇದೀಗ 50 ಪಾರ್ಕ್ಗಳ ಅಭಿವೃದ್ಧಿಯನ್ನು ಕೈಗೆತ್ತಿಕೊಳ್ಳಲಾಗಿದೆ ಎಂದು ಹೇಳಿದರು.
ವರದಿ: ಸೌಮ್ಯ ರೆಡ್ಡಿ
ಬ್ಯುರೋ ಚೀಫ್
ನ್ಯೂಇಂಡಿಯಾ ಕನ್ನಡ
ಶಿವಮೊಗ್ಗ.








