ಕಾಂಗ್ರೆಸ್ ಪಕ್ಷದಲ್ಲಿ ನಾಯಕತ್ವ ಜಟಾಪಟಿ|ಬೆಳಗಾವಿ ಅಧಿವೇಶನದ ಮೇಲೆ ಕರಿಛಾಯೆ|ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಆರೋಪ
ಸಿಎಂ ಹಾಗು ಡಿಸಿಎಂ ಮೇಲ್ನೋಟಕ್ಕೆ ಒಗ್ಗಟ್ಟಿನ ಮಂತ್ರ ಜಪಿಸಿತ್ತಾ, ಒಳಗೊಳಗೆ ಕತ್ತಿಮಸೆಯುತ್ತಿದ್ದಾರೆ. ಇದು ಆಡಳಿತದ ಮೇಲೆ ನೇರವಾಗಿ ವ್ಯತಿರಿಕ್ತ ಪರಿಣಾಮ ಬೀರಲು ಕಾರಣವಾಗಿದೆ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದರು.

ಸಿಎಂ ಸ್ಥಾನದ ಜಟಾಪಟಿ, ಗೊಂದಲಗಳು ಬೆಳಗಾವಿ ಚಳಿಗಾಲದ ಅಧಿವೇಶನದ ಮೇಲೆ ಕರಿಛಾಯೆ ಬೀರುವಂತಾಗಿದೆ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಆರೋಪಿಸಿದ್ದಾರೆ.
ಕಾಂಗ್ರೆಸ್ ಪಕ್ಷದ ನಾಯಕತ್ವ ಗೊಂದಲದ ಪರಿಣಾಮ ಅಧಿವೇಶನದಲ್ಲಿ ರಾಜ್ಯದ ಯಾವುದೇ ಜಲ್ವಂತ ಸಮಸ್ಯೆಗಳ ಸಮರ್ಪಕ ಚರ್ಚೆ ನಡೆಯುತ್ತಿಲ್ಲ ಎಂದು ಹೇಳಿದರು.
ಶಿವಮೊಗ್ಗದಲ್ಲಿ ಶನಿವಾರದಂದು ನಡೆದ ವಿಶೇಷ ಜಿಲ್ಲಾ ಕಾರ್ಯಕಾರಿಣಿ ಸಭೆಯಲ್ಲಿ ಭಾಗವಹಿಸಿ, ಬಳಿಕ ಮಾಧ್ಯಮಗಳನ್ನುದ್ದೇಶಿಸಿ ಅವರು ಮಾತನಾಡಿದರು.

ಸಿಎಂ ಹಾಗು ಡಿಸಿಎಂ ಮೇಲ್ನೋಟಕ್ಕೆ ಒಗ್ಗಟ್ಟಿನ ಮಂತ್ರ ಜಪಿಸಿತ್ತಾ,ಒಳಗೊಳಗೆ ಕತ್ತಿಮಸೆಯುತ್ತಿದ್ದಾರೆ. ಇದು ಆಡಳಿತದ ಮೇಲೆ ನೇರವಾಗಿ ವ್ಯತಿರಿಕ್ತ ಪರಿಣಾಮ ಬೀರಲು ಕಾರಣವಾಗಿದೆ ಎಂದರು.
ಬೆಳಗಾವಿ ಅಧಿವೇಶನದಲ್ಲಿ ಪಾಲ್ಗೊಳ್ಳಲು ಸಚಿವರುಗಳು ಆಸಕ್ತಿ ಕಳೆದುಕೊಂಡಿದ್ದಾರೆ. ಕಬ್ಬು, ಮೆಕ್ಕೆಜೊಳ ಬೆಳೆ ಹಾನಿ ಸೇರಿದಂತೇ, ರೈತರ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಸಿಕ್ಕಿಲ್ಲ. ಸಂಬಂಧಿಸಿದ ಸಚಿವರುಗಳು ಸದನದಲ್ಲಿ ಪಾಲ್ಗೊಳ್ಳುತ್ತಿಲ್ಲ.

ಕೃಷಿ ಸಚಿವರಂತೂ ಇದ್ದಾರೋ ಇಲ್ಲವೋ ಎಂಬಂತಾಗಿ ಜನ ಹುಡುಕುವಂತಾಗಿದೆ ಎಂದು ಬಿ.ವೈ.ವಿಜಯೇಂದ್ರ ಕಿಡಿಕಾರಿದರು.
ಕಾಂಗ್ರೆಸ್ನಲ್ಲಿ ಯಾರು ಅಸಲಿ ಹೈಕಮಾಂಡ?
ಸಿಎಂ ಸಿದ್ದರಾಮಯ್ಯ ಒಂದೆಡೆ ಒಗ್ಗಟ್ಟಿನ ಮಂತ್ರದ ಜಪ ಮಾಡುತ್ತಿದ್ದರೇ, ಇನ್ನೊಂದೆಡೆ ಅವರ ಪುತ್ರ ಡಾ.ಯತೀಂದ್ರ ಅವರು ನಮ್ಮ ಅಪ್ಪನೇ ಪೂರ್ಣಾವಧಿ ಸಿಎಂ ಎನ್ನುತ್ತಾರೆ.

ಸದಾ ಕಾಂಗ್ರೆಸ್ ಹೈಕಮಾಂಡ ಆದೇಶ ಪಾಲಿಸುತ್ತೇವೆ ಎನ್ನುವ ಕಾಂಗ್ರೆಸ್ನಲ್ಲಿ ಯತೀಂದ್ರ ಅವರ ಹೇಳಿಕೆ ನಂತರ ಯಾರು ಕಾಂಗ್ರೆಸ್ ಹೈಕಮಾಂಡ್ ಎಂಬ ಗೊಂದಲ ಮೂಡಿದೆ ಎಂದು ಬಿ.ವೈ.ವಿಜಯೇಂದ್ರ ಹೇಳಿದರು.
ಅಧಿವೇಶನ ಮುನ್ನ ನಾಯಕತ್ವ ವಿಚಾರ ಬಗೆಹರಿದಿದೆ ಎಂದು ಹೇಳಲಾಗುತ್ತಿದ್ದರೂ, ಈ ಗೊಂದಲ ಬೆಳಗಾವಿಯಲ್ಲಿ ಮುಂದುವರೆದಿದೆ. ಅಧಿವೇಶನ ನೆಪ ಮಾತ್ರಕ್ಕೆ ನಡೆದಿದೆ.
ರಾಜ್ಯದ ಹಿತದೃಷ್ಟಿಯಿಂದ ಕನಿಷ್ಟ ಅಧಿವೇಶನ ಮುಗಿಯುವ ತನಕ ಆಡಳಿತದತ್ತ ಗಮನಹರಿಸಬೇಕಿದೆ ಎಂದು ಬಿ.ವೈ.ವಿಜಯೇಂದ್ರ ಸಲಹೆ ನೀಡಿದರು.
ಗೃಹಲಕ್ಷ್ಮೀ ಚುನಾವಣೆಗೆ ಮಾತ್ರ ಚಲಾವಣೆ|
ಮಹಿಳೆಯರಿಗೆ ತಿಂಗಳಿಗೆ ಕರೆಕ್ಟಾಗಿ ಎರಡು ಸಾವಿರ ರೂ ನೀಡುತ್ತೇವೆ ಎಂದು ಅಧಿಕಾರಕ್ಕೆ ಬಂದ ಕಾಂಗ್ರೆಸ್ ಆ ನಂತರ ವಿಫಲವಾಗಿದೆ.
ಗೃಹಲಕ್ಷ್ಮೀ ಯೋಜನೆಯು ಕೇವಲ ಚುನಾವಣೆಯಲ್ಲಿ ಸುಳ್ಳು ಭರವಸೆಗೆ ಬಳಸಿದ ಯೋಜನೆಯಾಗಿದೆ ಎಂಬುದು ಈಗ ಸಾಬೀತಾಗಿದೆ.
ಹಲವು ತಿಂಗಳಿಂದ ಗೃಹಲಕ್ಷ್ಮೀ ಹಣ ಬಿಡುಗಡೆ ಮಾಡದೇ ಇರುವುದು ಇದಕ್ಕೆ ಸಾಕ್ಷಿ ಎಂದು ಬಿ.ವೈ.ವಿಜಯೇಂದ್ರ ಆರೋಪಿಸಿದರು.
ಉದ್ಯೋಗ ಸೃಷ್ಠಿ-ರಾಹುಲ್ ಗಾಂಧಿ ಸುಳ್ಳು ಭರವಸೆ|
ಕರ್ನಾಟಕದಲ್ಲಿ ಭಾರೀ ಪ್ರಮಾಣದಲ್ಲಿ ಉದ್ಯೋಗ ಸೃಷ್ಟಿ ಮಾಡುವದಾಗಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಭರವಸೆ ನೀಡಿದ್ದು ಈಗ ಸುಳ್ಳಾಗಿದೆ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದರು.

ಕೈಗಾರಿಕೆಗಳು ಬೇರೆ ರಾಜ್ಯದತ್ತ ಮುಖ ಮಾಡುತ್ತಿವೆ. ತುಂಗಾ ಮೇಲ್ದಂಡೆ ಯೋಜನೆ ಸೇರಿದಂತೆ ಹಲವು ಯೋಜನೆ ಜಾರಿಗೆಗೆ ಕೇಂದ್ರ ಸರ್ಕಾರ ಸಿದ್ದವಿದ್ದರೂ ರಾಜ್ಯ ಸರ್ಕಾರ ಸಹಕಾರ ನೀಡುತ್ತಿಲ್ಲ.
ಇದರಿಂದ ಎಲ್ಲ ಕ್ಷೇತ್ರಗಳಲ್ಲೂ ಅಭಿವೃದ್ಧಿ ಕುಂಠಿತವಾಗಿದೆ ಎಂದು ಬಿ.ವೈ.ವಿಜಯೇಂದ್ರ ಆರೋಪಿಸಿದರು.
ಅಧಿಕಾರಕ್ಕೆ ಬರುವ ಮುನ್ನ ಕಾಂಗ್ರೆಸ್ ನೀಡಿದ್ದ ಭರವಸೆಗಳೆಲ್ಲ ಹುಸಿಯಾಗಿದ್ದು, ಇದಕ್ಕೆ ಸಿಎಂ ಸಿದ್ದರಾಮಯ್ಯನವರ ಇಚ್ಚಾಶಕ್ತಿ ಕೊರತೆಯೇ ಕಾರಣ ಎಂದು ಬಿ.ವೈ.ವಿಜಯೇಂದ್ರ ಹರಿಹಾಯ್ದರು.
ಬಡವರ ಯೋಜನೆಗೆ ಸರ್ಕಾರದ ಕಲ್ಲು|
ಸುಪ್ರೀಂಕೋರ್ಟ್ನಿಂದ ಛೀಮಾರಿ!
ಬಡವರಿಗೆ ಅನುಕೂಲವಾಗಲಿ ಎಂದು ಕೇಂದ್ರ ಸರ್ಕಾರ ಜಾರಿಗೆ ತಂದ ಜನೌಷಧಿ ಕೇಂದ್ರಗಳನ್ನ ಮುಚ್ಚಿಸಲು ಹೊರಟಿದ್ದ ರಾಜ್ಯ ಸರ್ಕಾರಕ್ಕೆ ಸುಪ್ರೀಂಕೋರ್ಟ್ ಛೀಮಾರಿ ಹಾಕಿದೆ ಎಂದು ಬಿ.ವೈ.ವಿಜಯೇಂದ್ರ ಹೇಳಿದರು.
ಕೇಂದ್ರ ಸರ್ಕಾರದ ಹಲವು ಅಭಿವೃಧ್ದಿಪರ ಯೋಜನೆಗಳಿಗೆ ರಾಜ್ಯ ಸರ್ಕಾರ ಅಡ್ಡಗಾಲು ಹಾಕುತ್ತ ಬಂದಿದೆ ಎಂದು ಆರೋಪಿಸಿದರು.
ದ್ವೇಷ ಭಾಷಣ ವಿಧೇಯಕ-ಬಿಜೆಪಿ ವಿರೋಧ|
ವೈಫಲ್ಯದ ವಿರುದ್ದ ಧ್ವನಿ ಎತ್ತಿದವರನ್ನ ದಮನ ಮಾಡಲೇಂದೇ ದ್ವೇಷ ಭಾಷಣ ನಿಯಂತ್ರಣ ವಿಧೇಯಕವನ್ನು ರಾಜ್ಯ ಸರ್ಕಾರ ಜಾರಿಗೆ ತರಲು ಹೊರಟಿದೆ ಎಂದು ಬಿ.ವೈ.ವಿಜಯೇಂದ್ರ ಆರೋಪಿಸಿದರು.
ಇದು ಇಂದಿರಾಗಾಂಧಿ ಅವಧಿಯಲ್ಲಿನ ತುರ್ತು ಪರಿಸ್ಥಿತಿ ನೆನಪು ತರಿಸುತ್ತಿದೆ. ಬಿಜೆಪಿ ಈ ವಿಧೇಯಕದ ವಿರುದ್ದ ಸದನದಲ್ಲಿ ಹೋರಾಟ ನಡೆಸಲಿದೆ ಎಂದರು.
ಶಾಸಕ ಎಸ್.ಎನ್.ಚೆನ್ನಬಸಪ್ಪ, ವಿಧಾನಪರಿಷತ್ ಸದಸ್ಯ ಡಾ.ಧನಂಜಯ ಸರ್ಜಿ, ಮಾಜಿ ಶಾಸಕ ಕೆಜಿ ಕುಮಾರಸ್ವಾಮಿ, ಜಿಲ್ಲಾಧ್ಯಕ್ಷ ಜಗದೀಶ್, ಮುಖಂಡರಾದ ಟಿಡಿ ಮೇಘರಾಜ್, ಮಾಲತೇಶ್ , ಸತೀಶ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ವರದಿ: ಸೌಮ್ಯ ರೆಡ್ಡಿ
ಬ್ಯುರೋ ಚೀಫ್
ನ್ಯೂಇಂಡಿಯಾ ಕನ್ನಡ
ಶಿವಮೊಗ್ಗ.








