3 ಮುಖ್ಯ ಕರ್ತವ್ಯಗಳಿಗೆ ಸಮರ್ಪಿತ ಬಜೆಟ್|12.2 ಲಕ್ಷ ಕೋಟಿರೂ.ಮೂಲಭೂತ ಸೌಕರ್ಯಕ್ಕೆ ಆದ್ಯತೆ|ಸೀ ಪ್ಲೇನ್ ಪ್ರವಾಸೋದ್ಯಮಕ್ಕೆ ಉತ್ತೇಜನ-ಬಿ.ವೈ.ರಾಘವೇಂದ್ರ
ಪ್ರವಾಸೋದ್ಯಮಕ್ಕೂ ಹೆಚ್ಚಿನ ಗಮನಹರಿಸಿರುವ ಕಾರಣ ಶಿವಮೊಗ್ಗದ ಸಿಗಂದೂರು, ಮತ್ತು ಮಂಗಳೂರಿನಲ್ಲಿ ಸೀ ಪ್ಲೇನ್ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುವ ಯೋಜನೆಯು ಸೇರಿದೆ ಎಂದು ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಹೇಳಿದರು.

ಶಿವಮೊಗ್ಗ: ಕೇಂದ್ರ ಮಂಡಿಸಿದ ಪ್ರಸಕ್ತ ಬಜೆಟ್ 3 ಮುಖ್ಯ ಕರ್ತವ್ಯಗಳಿಗೆ ಸಮರ್ಪಿತ ಬಜೆಟ್ ಆಗಿದ್ದು, ಅದನ್ನ ಜನರಿಗೆ ತಲುಪಿಸುವ ಕರ್ತವ್ಯ ನನ್ನದಾಗಿದೆ ಎಂದು ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಹೇಳಿದ್ದಾರೆ.
ಶನಿವಾರದಂದು ಶಿವಮೊಗ್ಗದ ಬಿಜೆಪಿ ಕಚೇರಿಯಲ್ಲಿ ಏರ್ಪಡಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೆಹಲಿಯ ರಾಜಪಥದಿಂದ ಹಿಡಿದು ಪ್ರಧಾನಿ ಕಚೇರಿ, ರಾಷ್ಟಪತಿ ಭವನವನ್ನ ಕರ್ತವ್ಯ ಭವನಗಳೆಂದು ಮರುನಾಮಕಗೊಂಡಿದ್ದು ಕರ್ತವ್ಯ ಭವನದಿಂದ ಕೊಟ್ಟ ಬಜೆಟ್ 3 ಕರ್ತವ್ಯಗಳನ್ನ ಪ್ರತಿಬಿಂಬಿಸುವ ಬಜೆಟ್ ಎಂದರು.
ಅದರಲ್ಲಿ ಅಭಿವೃದ್ದಿಗೆ ವೇಗ, ಜನಕೇಂದ್ರಿತ ಸಾಮರ್ಥ್ಯ ವೃದ್ದಿ, ಸಮಗ್ರ ಅವಕಾಶಗಳನ್ನ ಒಳಗೊಂಡಿದೆ. ಜನಪರ ಬಜೆಟ್ನಲ್ಲಿ ಮೂಲಭೂತ ಸೌಕರ್ಯಕ್ಕೆ ಒತ್ತು ನೀಡಲಾಗಿದೆ. ಅದರಲ್ಲಿ 12.2 ಲಕ್ಷಕೋಟಿ ಮೂಲಭೂತ ಸೌಕರ್ಯಕ್ಕೆ ಆದ್ಯತೆ ನೀಡಲಾಗಿದೆ.
ಇದು ಯುಪಿಎ ಸರ್ಕಾರ ನೀಡಿದ್ದಕ್ಕಿಂತ 6 ರಿಂದ 7ಪಟ್ಟು ಹೆಚ್ಚು ಎಂದು ಹೇಳಿದ ಅವರು, ಇದನ್ನು ಕ್ಷೇತ್ರದ ಜನತೆಗೆ ತಲುಪಿಸುವ ಕರ್ತವ್ಯವೂ ತಮ್ಮದಾಗಿದೆ ಎಂದು ತಿಳಿಸಿದರು.
ಹಾಗೇ ಪ್ರವಾಸೋದ್ಯಮಕ್ಕೂ ಹೆಚ್ಚಿನ ಗಮನಹರಿಸಿರುವ ಕಾರಣ ಶಿವಮೊಗ್ಗದ ಸಿಗಂದೂರು, ಮತ್ತು ಮಂಗಳೂರಿನಲ್ಲಿ ಸೀ ಪ್ಲೇನ್ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುವ ಯೋಜನೆಯು ಸೇರಿದೆ ಎಂದು ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಹೇಳಿದರು.
ಕ್ಯಾನ್ಸರ್ ವಿರುದ್ದದ ಹೋರಾಟಕ್ಕೆ ಬಲ ನೀಡುವಂತೆ ಕ್ಯಾನ್ಸರ್ ಪೀಡಿತ ರೋಗಿಗಳ ಚಿಕಿತ್ಸೆಗೆ ಬೇಕಾದ 17 ಔಷಧಿಗೆ ರಿಯಾಯಿತಿ ನೀಡಿರುವುದು ಬಜೆಟ್ ವಿಶೇಷತೆಗಳಲ್ಲೊಂದು ಎಂದು ತಿಳಿಸಿದರು.
ಮೆಡಿಕಲ್ ಟೂರಿಸಮ್ ಹಾಗೂ ಬಯೋಫಾರ್ಮಸಿ ಕ್ಷೇತ್ರಕ್ಕೂ ಒತ್ತುನೀಡಲಾಗಿದೆ. ಮೆಡಿಕಲ್ ಟೂರಿಸಂ ಯೋಜನೆಯಡಿ 5 ಪ್ರಾದೇಶಿಕ ಕೇಂದ್ರಗಳ ಸ್ಥಾಪನೆ ಬಗ್ಗೆ ಘೋಷಿಸಿದ್ದು ಮಂಗಳೂರಿನಲ್ಲಿ ಒಂದು ಮೆಡಿಕಲ್ ಟೂರಿಸಂ ಕೇಂದ್ರದ ಬಗ್ಗೆಯೂ ಪ್ರಸ್ತಾಪವಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ, ವಿಧಾನಪರಿಷತ್ ಸದಸ್ಯರಾದ ಡಿ.ಎಸ್. ಅರುಣ್, ಡಾ ಧನಂಜಯ್ ಸರ್ಜಿ,ನಗರ ಪ್ರಧಾನ ಕಾರ್ಯದರ್ಶಿ ಶಿವರಾಜ್,ಮುಖಂಡರಾದ ಹರೀಶ್, ಮಾಧ್ಯಮ ಪ್ರಮುಖ್ ಚಂದ್ರಶೇಖರ್ ಉಪಸ್ಥಿತರಿದ್ದರು.
ವರದಿ: ಸೌಮ್ಯ ರೆಡ್ಡಿ
ಬ್ಯುರೋ ಚೀಫ್
ನ್ಯೂಇಂಡಿಯಾ ಕನ್ನಡ
ಶಿವಮೊಗ್ಗ.







