ಹೈಕೋರ್ಟ್ ಅಂಗಳಕ್ಕೆ ಬಂದ “ತೃತೀಯ ಭಾಷೆ” ಗ್ರೇಡಿಂಗ್ ತೀರ್ಮಾನ| ರದ್ದು ಕೋರಿ ಪಿಐಎಲ್ ಸಲ್ಲಿಕೆ|ಮಧು ಬಂಗಾರಪ್ಪ ಸೇರಿ ಮೂವರು ಪ್ರತಿವಾದಿಗಳು
ತೃತೀಯ ಭಾಷೆಗಳಿಗೆ ಅಂಕಗಳು ಕಡ್ಡಾಯವಲ್ಲ ಬದಲಿಗೆ ಗ್ರೇಡ್ಗಳನ್ನು ಪರಿಗಣಿಸಲಾಗುತ್ತದೆ ಎಂದು ಇತ್ತೀಚೆಗೆ ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ ದಿಢೀರ ಘೋಷಣೆ ಮಾಡಿದ್ದನ್ನು ಹೈಕೋರ್ಟ್ಗೆ ಸಲ್ಲಿಕೆ ಮಾಡಿರುವ ಅರ್ಜಿಯಲ್ಲಿ ಆಕ್ಷೇಪಣೆ ಎತ್ತಲಾಗಿದೆ.

ಬೆಂಗಳೂರು: ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಹಿಂದಿ ಸೇರಿದಂತೇ ತೃತೀಯ ಭಾಷೆಗಳಿಗೆ ಗ್ರೇಡ್ ನೀಡಲು ಮುಂದಾಗಿದ್ದ ರಾಜ್ಯ ಸರ್ಕಾರದ ತೀರ್ಮಾನದ ವಿರುದ್ದ ಈಗ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಹೈಕೋರ್ಟ್ನಲ್ಲಿ ಸಲ್ಲಿಸಲಾಗಿದೆ.
ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ, ಶಾಲಾ ಶಿಕ್ಷಣ ಇಲಾಖೆ ಕಾರ್ಯದರ್ಶಿ, ಆಯುಕ್ತರು ಅವರನ್ನು ಪ್ರತಿವಾದಿಗಳನ್ನಾಗಿ ಮಾಡಲಾಗಿದೆ.
ಗ್ರೇಡಿಂಗ್ ಯಾಕೆ ಬೇಡ?
ಹೈಕೋರ್ಟ್ನಲ್ಲಿ ಪಿಐಎಲ್ ಸಲ್ಲಿಕೆ ಮಾಡಿರುವ ಬೆಂಗಳೂರಿನ ಹೆಚ್.ಎನ್.ಚಂದನಾ, ಮತ್ತು ಎಸ್.ವೆಂಕಟೇಶ್ ಅವರುಗಳು ತೃತೀಯ ವಿಷಯಗಳಿಗೆ ಗ್ರೇಡಿಂಗ್ ಪದ್ದತಿ ಜಾರಿಗೆ ತರುವದರಿಂದ ಆಗುವ ಪರಿಣಾಮಗಳನ್ನು ಎಳೆಎಳೆಯಾಗಿ ವಿವರಿಸಿದ್ದಾರೆ.

ಸರ್ಕಾರದ ದಿಢೀರ ನಿರ್ಧಾರವು ಪರಿಚ್ಛೇದ 21A ಶಿಕ್ಷಣ ಹಕ್ಕಿನ ಮೇಲೆ ಪರಿಣಾಮ ಬೀರುವದಲ್ಲದೇ ವಿದ್ಯಾರ್ಥಿಗಳ ಶಿಕ್ಷಣ ಭವಿಷ್ಯವನ್ನು ಅಸ್ಥಿರಗೊಳಿಸಲಿದೆ. ಅಲ್ಲದೇ ಪರಿಚ್ಛೇದ 14ರಡಿ ಸಮಾನತೆ ಹಕ್ಕನ್ನು ಉಲ್ಲಂಘಿಸುತ್ತದೆ ಎಂದು ಹೇಳಿದ್ದಾರೆ.
ತರಾತುರಿ ನಿರ್ಧಾರ!
ತೃತೀಯ ಭಾಷೆಗಳಿಗೆ ಅಂಕಗಳು ಕಡ್ಡಾಯವಲ್ಲ ಬದಲಿಗೆ ಗ್ರೇಡ್ಗಳನ್ನು ಪರಿಗಣಿಸಲಾಗುತ್ತದೆ ಎಂದು ಇತ್ತೀಚೆಗೆ ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ ದಿಢೀರ ಘೋಷಣೆ ಮಾಡಿದ್ದನ್ನು ಹೈಕೋರ್ಟ್ಗೆ ಸಲ್ಲಿಕೆ ಮಾಡಿರುವ ಅರ್ಜಿಯಲ್ಲಿ ಆಕ್ಷೇಪಣೆ ಎತ್ತಲಾಗಿದೆ.

ಹೀಗೆ ತರಾತುರಿ ನಿರ್ಧಾರ ಮಾಡುವ ಮುನ್ನ ಸಾರ್ವಜನಿಕವಾಗಿ ಚರ್ಚೆ ಮಾಡದೇ ಇರುವದು, ಸಚಿವ ಸಂಪುಟದ ಅನುಮೋದನೆ ಪಡೆಯದೇ ಇರುವದು ಹಾಗೂ ಭಾಷಾ ತಜ್ಞರ ಸಲಹೆ ಪಡೆಯದೇ ಏಕಪಕ್ಷೀಯವಾಗಿ ತೀರ್ಮಾನ ತೆಗೆದುಕೊಂಡಿರುವದನ್ನು ಅರ್ಜಿಯಲ್ಲಿ ತಿಳಿಸಲಾಗಿದೆ.
ವಿದ್ಯಾರ್ಥಿಗಳಲ್ಲಿ ಗೊಂದಲ ಮೂಡಿಸಿದ ನಿರ್ಧಾರ!
ಸಚಿವ ಮಧು ಬಂಗಾರಪ್ಪ ಅವರು ಗ್ರೇಡಿಂಗ ವ್ಯವಸ್ಥೆ ಬಗ್ಗೆ ಕಳೆದ ಮಾರ್ಚ್ 29 ರಂದು ಪ್ರಕಟಿಸಿದಾಗ ಎಸ್.ಎಸ್.ಎಲ್.ಸಿ ಪರೀಕ್ಷೆ ನಡೆದಿತ್ತು.

ಸರ್ಕಾರದ ದಿಢೀರ ತೀರ್ಮಾನದಿಂದ ಪರೀಕ್ಷಾ ತಯಾರಿ ಮಾಡಿಕೊಂಡಿದ್ದ ವಿದ್ಯಾರ್ಥಿಗಳಲ್ಲಿ ಹಾಗೂ ಪೋಷಕರಲ್ಲಿ ಗೊಂದಲಕ್ಕೀಡುವಂತೆ ಮಾಡಿತು. ಸಚಿವ ಮಧು ಬಂಗಾರಪ್ಪ ಅವರ ಈ ತೀರ್ಮಾನ ರಾಜ್ಯದಲ್ಲಿ ತೀವ್ರ ವಿರೋಧಕ್ಕೆ ಕಾರಣವಾಗಿದೆ.
ನ್ಯಾಯಪೀಠ ಮಧ್ಯಪ್ರವೇಶಿಸಲು ಮನವಿ!
ರಾಜ್ಯ ಸರ್ಕಾರದ ದಿಢೀರ ನಿರ್ಧಾರದಿಂದ ಶಿಕ್ಷಣ ವ್ಯವಸ್ಥೆ ಮೇಲೆ ಪರಿಣಾಮ ಬೀರುವದರಿಂದ ತೃತೀಯ ಭಾಷೆಗಳಿಗೆ ಗ್ರೇಡಿಂಗ್ ಪದ್ದತಿಯನ್ನು ಜಾರಿಗೆ ತರಲು ಹೊರಟಿರುವದರಿಂದ ಈ ಆದೇಶವನ್ನು ರದ್ದುಪಡಿಸಬೇಕು ಎಂದು ಕೋರಲಾಗಿದ್ದು, ನ್ಯಾಯಾಲಯವು ಈ ಕುರಿತು ಮಧ್ಯಪ್ರವೇಶಿಸಬೇಕು ಎಂದು ಅರ್ಜಿದಾರರು ಮನವಿ ಮಾಡಿದ್ದಾರೆ.
ವರದಿ: ವಿಜಯೀಂದ್ರ ಪಿ.ಹುನಗುಂದ್
ಪ್ರಧಾನ ಸಂಪಾದಕ
ನ್ಯೂಇಂಡಿಯಾ ಕನ್ನಡ
ಬೆಂಗಳೂರು.








