ಶಿವಮೊಗ್ಗ: ಕೋಟೆ ಶ್ರೀ ಸೀತಾರಾಮಾಂಜನೇಯ ದೇವಾಲಯ|ಸೀತಾಕಲ್ಯಾಣೋತ್ಸವಕ್ಕೆ 100ರ ಸಂಭ್ರಮ|ಲೋಕಕಲ್ಯಾಣಾರ್ಥವಾಗಿ ತಿಂಗಳಿಡಿ ಕಾರ್ಯಕ್ರಮ
ಶತಮಾನೋತ್ಸವದ ಪ್ರಯುಕ್ತ ಡಿ.7 ರಿಂದ ಡಿ.17 ರವರೆಗೆ ಶ್ರೀಮದ್ ಭಾಗವತ ಮಹಾಪುರಾಣ ಹೋಮ, ಉಪನ್ಯಾಸ ಮತ್ತು ವಿಷ್ಣುವಿನ ದಶಾವತಾರೋತ್ಸವವನ್ನು 10 ದಿನಗಳ ಕಾಲ ಹಮ್ಮಿಕೊಳ್ಳಲಾಗಿದೆ.

ಶಿವಮೊಗ್ಗ ಡಿ.5, ನಗರದ ಪ್ರಸಿದ್ದ ಕೋಟೆ ಶ್ರೀ ಸೀತಾರಾಮಾಂಜನೇಯ ದೇವಾಲಯದಲ್ಲಿ ಸೀತಾ ಕಲ್ಯಾಣ ಶತಮಾನೋತ್ಸವ ಸೇವಾ ಸಮಿತಿಯ ವತಿಯಿಂದ ಲೋಕಕಲ್ಯಾಣಾರ್ಥವಾಗಿ ಡಿ.7 ರಿಂದ ಜನವರಿ 5 ರವರೆಗೆ ಒಂದು ತಿಂಗಳ ಕಾಲ ವೈವಿಧ್ಯಮಯ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
ಶುಕ್ರವಾರದಂದು ಶ್ರೀ ಸೀತಾರಾಮಾಂಜನೇಯ ದೇವಾಲಯದ ಪುರೋಹಿತ ಭಾರ್ಗವ ರಾಮ ಈ ವಿಷಯ ತಿಳಿಸಿದರು.

1925 ರಲ್ಲಿ ಮಾರ್ಗಶಿರ ಶುದ್ಧ ದಶಮಿಯ ದಿನ ಭಕ್ತಾದಿಗಳ ನೆರವಿನೊಂದಿಗೆ ಶ್ರೀ ಸೀತಾರಾಮ ಲಕ್ಷ್ಮಣ ಸ್ವಾಮಿಯ ಉತ್ಸವ ಬಿಂಬವನ್ನು ಪ್ರತಿಷ್ಠಾಪನೆ ಮಾಡಿಸಿ, ಅದೇ ವರ್ಷದಿಂದ ಶ್ರೀ ಸೀತಾಕಲ್ಯಾಣ ಉತ್ಸವವನ್ನು ಅರ್ಚಕರಾಗಿದ್ದ ಭಕ್ತಶಿರೋಮಣಿ ಅನಂತರಾಮ ಅಯ್ಯಂಗಾರ್ರವರು ವೈಭವದಿಂದ ಪ್ರಾರಂಭಿಸಿದ್ದರು.
ದೂರ್ವಾಸ ಕ್ಷೇತ್ರವೆಂದೇ ಪ್ರಸಿದ್ದಿ ಪಡೆದ ಈ ದೇವಾಲಯದಲ್ಲಿ ಸೀತಾಕಲ್ಯಾಣೋತ್ಸವ ಆರಂಭಿಸಿ ನೂರು ಸಂವತ್ಸರ ತುಂಬಿದ ಹಿನ್ನಲೆಯಲ್ಲಿ ಡಿ29 ರಂದು ಭಾನುವಾರ ಸೀತಾಕಲ್ಯಾಣ ಶತಮಾನೋತ್ಸವ ಕಾರ್ಯಕ್ರಮ ನಡೆಸಲು ನಿರ್ಧರಿಸಲಾಗಿದೆ ಎಂದು ಪುರೋಹಿತ ಭಾರ್ಗವ ರಾಮ ತಿಳಿಸಿದರು.

ಶತಮಾನೋತ್ಸವದ ಪ್ರಯುಕ್ತ ಡಿ.7 ರಿಂದ ಡಿ.17 ರವರೆಗೆ ಶ್ರೀಮದ್ ಭಾಗವತ ಮಹಾಪುರಾಣ ಹೋಮ, ಉಪನ್ಯಾಸ ಮತ್ತು ವಿಷ್ಣುವಿನ ದಶಾವತಾರೋತ್ಸವವನ್ನು 10 ದಿನಗಳ ಕಾಲ ಹಮ್ಮಿಕೊಳ್ಳಲಾಗಿದೆ ಎಂದರು.
ಡಿಸೆಂಬರ್ 19 ರಂದು ಶಕ್ತಿ ದೇವತೆಗಳ ಸಮಾಗಮ
ಮುಖಂಡ ದೀನ ದಯಾಳು ಮಾತನಾಡಿ, ಡಿಸೆಂಬರ್ 19, 2025 ರಂದು ವಿಶ್ವ ಹಿಂದೂ ಪರಿಷತ್ ನೇತೃತ್ವದಲ್ಲಿ 27 ನೇ ವರ್ಷದ ಶಕ್ತಿ ದೇವತೆಗಳ ಸಮಾಗಮ ಕಾರ್ಯಕ್ರಮವನ್ನು ಕೋಟೆ ಶ್ರೀ ಸೀತಾರಾಮಾಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಆಯೋಜಿಸಲಾಗಿದೆ ಎಂದರು.
ನಗರದ ದೇವತೆಗಳೆಲ್ಲ ಒಂದೆಡೆ ಸೇರುವ ಶಕ್ತಿ ದೇವತೆಗಳ ಸಮಾಗಮ ಕಾರ್ಯಕ್ರಮ ವಿಶೇಷತೆ ಪಡೆದುಕೊಂಡಿದೆ.
ಧಾರ್ಮಿಕ ಜಾಗೃತಿ ಹಾಗೂ ಸಾಮರಸ್ಯದ ಹಿನ್ನೆಲೆಯಲ್ಲಿ ಹಮ್ಮಿಕೊಂಡಿರುವ ಈ ಕಾರ್ಯಕ್ರಮಕ್ಕೆ ನಗರದ 50 ಕ್ಕೂ ಹೆಚ್ಚು ಶಕ್ತಿ ದೇವತೆಗಳು ಆಗಮಿಸಲಿವೆ.
ನಗರದ ವಿವಿಧ ಬಡಾವಣೆಯ 15 ಸಾವಿರಕ್ಕೂ ಅಧಿಕ ಭಕ್ತಾದಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿ, ತಮ್ಮದೇ ಪದ್ಧತಿಯಲ್ಲಿ ಪೂಜೆಯನ್ನು ಸಲ್ಲಿಸುತ್ತಾರೆ.
ಅಂದು ಸಂಜೆ ಭಕ್ತಾದಿಗಳು ದೇವತೆಗಳಿಗೆ ಮಡಿಲಕ್ಕಿ ಸಮರ್ಪಿಸಿ ಭಕ್ತಿಭಾವ ಮೆರೆಯುವರು ಎಂದು ತಿಳಿಸಿದರು.
ವರದಿ: ಸೌಮ್ಯ ರೆಡ್ಡಿ
ಬ್ಯುರೋ ಚೀಫ್
ನ್ಯೂಇಂಡಿಯಾ ಕನ್ನಡ
ಶಿವಮೊಗ್ಗ.






