ಶಿವಮೊಗ್ಗದಲ್ಲಿ ಬೆಳ್ಳಂಬೆಳಗ್ಗೆ ಗ್ಯಾಸ್ ಸಿಲಿಂಡರ್ ಸ್ಪೋಟ|ಕಿತ್ತು ಹೋದ ಮನೆ ಮೇಲ್ಛಾವಣಿ|ತಪ್ಪಿದ ಭಾರಿ ದುರಂತ, ನಿಟ್ಟಿಸಿರು ಬಿಟ್ಟ ಸ್ಥಳೀಯರು
ಸಿಲಿಂಡರ್ ಸ್ಪೋಟದಿಂದ ಮನೆಯಲ್ಲಿದ್ದ ವಸ್ತುಗಳು ಸುಟ್ಟು ಹಾನಿಯಾಗಿದ್ದು ಟಿವಿ , ಪ್ರಿಡ್ಜ್, ವಾಷಿಂಗ್ ಮೆಷಿನ್, ಕೆಲ ದಾಖಲೆಪತ್ರಗಳು ಸುಟ್ಟು ಹೋಗಿವೆ. ಸಿಲಿಂಡರ್ ಸ್ಪೋಟದ ತೀವ್ರತೆಗೆ ಮನೆ ಶೀಟಿನದ್ದಾಗಿದ್ದರಿಂದ ಮೇಲ್ಛಾವಣಿ ಕಿತ್ತು ಹೋಗಿದೆ.

ಶಿವಮೊಗ್ಗ: ಗ್ಯಾಸ್ ಸಿಲಿಂಡರ್ ಸ್ಪೋಟಗೊಂಡ ಪರಿಣಾಮ ಇಡಿ ಮನೆ ಸಂಪೂರ್ಣ ಜಖಂಗೊಂಡಿರುವ ಘಟನೆ ಶಿವಮೊಗ್ಗದ ಸಿದ್ದೇಶ್ವರ ನಗರದ ನಾಲ್ಕನೇ ತಿರುವುನಲ್ಲಿ ನಡೆದಿದೆ.
ಗುರುವಾರದಂದು ಬೆಳಗ್ಗೆ 10 ಗಂಟೆಯ ಸುಮಾರಿಗೆ ಈ ಘಟನೆ ನಡೆದಿದ್ದು, ಅದೃಷ್ಟಾವಶಾತ್ ಮನೆಯಲ್ಲಿ ಯಾರೂ ಇರದ ಕಾರಣ ಸಾವು ನೋವು ಸಂಭವಿಸಿಲ್ಲ.
ನರಸಿಂಹಮೂರ್ತಿ ಎಂಬುವರು ಮನೆ ಮಾಲೀಕರಾಗಿದ್ದು ಮಹೇಶ್ ಎಂಬುವವರಿಗೆ ಬಾಡಿಗೆ ಮೇಲೆ ನೀಡಿದ್ದರು ಎನ್ನಲಾಗಿದೆ. ಮಹೇಶ್ ಬೀಡಾ ಅಂಗಡಿ ವ್ಯಾಪಾರ ಮಾಡುತ್ತಿದ್ದರೆಂದು ತಿಳಿದುಬಂದಿದೆ.
ಸಿಲಿಂಡರ್ ಸ್ಪೋಟದಿಂದ ಮನೆಯಲ್ಲಿದ್ದ ವಸ್ತುಗಳು ಸುಟ್ಟು ಹಾನಿಯಾಗಿದ್ದು ಟಿವಿ , ಪ್ರಿಡ್ಜ್, ವಾಷಿಂಗ್ ಮೆಷಿನ್, ಕೆಲ ದಾಖಲೆಪತ್ರಗಳು ಸುಟ್ಟು ಹೋಗಿವೆ.
ಸಿಲಿಂಡರ್ ಸ್ಪೋಟದ ತೀವ್ರತೆಗೆ ಮನೆ ಶೀಟಿನದ್ದಾಗಿದ್ದರಿಂದ ಮೇಲ್ಛಾವಣಿ ಕಿತ್ತು ಹೋಗಿದೆ. ಹಾಗೆಯೇ ಸ್ಫೋಟದ ರಭಸಕ್ಕೆ ಪಕ್ಕದ ಮನೆಗೂ ಕೊಂಚ ಹಾನಿಯಾಗಿದೆ ಎನ್ನಲಾಗಿದೆ. ಲಕ್ಷಾಂತರ ಮೌಲ್ಯದ ಹಾನಿ ಉಂಟಾಗಿದೆ ಎಂದು ಅಂದಾಜಿಸಲಾಗಿದೆ.
ವಿಷಯ ತಿಳಿಯುತ್ತಿದ್ದಂತೆ ಅಗ್ನಿಶಾಮಕ ದಳ ಸ್ಥಳಕ್ಕೆ ದೌಡಾಯಿಸಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದೆ.
ಅಗ್ನಿಶಾಮಕ ದಳದ ಎ.ಎಫ್.ಎಸ್.ಟಿ.ಓ ಹುಸೇನ್, ಎಲ್.ಎಫ್ ಲೋಹಿತ್, ಎಫ್.ಡಿ ಶರತ್, ಎಫ್.ಎಂ ವೆಂಕಟೇಶ್, ಸಾಗರ್ ರಕ್ಷಣಾ ಕಾರ್ಯದಲ್ಲಿ ಭಾಗಿಯಾಗಿದ್ದರು. ಶಿವಮೊಗ್ಗ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವರದಿ: ಸೌಮ್ಯ ರೆಡ್ಡಿ
ಬ್ಯುರೋ ಚೀಫ್
ನ್ಯೂಇಂಡಿಯಾ ಕನ್ನಡ
ಶಿವಮೊಗ್ಗ.







