ಶರಾವತಿ ಪಂಪ್ಡ್ ಸ್ಟೋರೇಜ್ ವಿದ್ಯುತ್ ಯೋಜನೆ|ಏಪ್ರಿಲ್ 16ಕ್ಕೆ ಬೈಕ್, ಸೈಕಲ್ ಮತ್ತು ಕಾರಿನ ಜಾಥಾ|ಯೋಜನೆ ಕೈಬಿಡದಿದ್ದರೇ ಉಗ್ರ ಹೋರಾಟ-ಕೆ.ಎಸ್.ಈಶ್ವರಪ್ಪ
ಮಾಜಿ ಡಿಸಿಎಂ ಕೆ ಎಸ್ ಈಶ್ವರಪ್ಪ ಹಾಗೂ ಪರಿಸರಕ್ಕಾಗಿ ನಾವು ಸಂಘಟನೆಯ ಮುಖ್ಯಸ್ಥ ಪ್ರೊ. ಎಲ್.ಕೆ.ಶ್ರೀಪತಿ, ಏಪ್ರಿಲ್ 16 ರಂದು ನಗರದಲ್ಲಿ ಬೈಕ್ ಹಾಗೂ ಸೈಕಲ್ ಮತ್ತು ಕಾರಿನ ಜಾಥಾ ನಡೆಸುವ ಮೂಲಕ ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ ಬಗ್ಗೆ ಜನಜಾಗೃತಿ ಮೂಡಿಸಲಾಗುವುದು ಎಂದು ಹೇಳಿದರು.

ಶಿವಮೊಗ್ಗ: ಶರಾವತಿ ಪಂಪ್ಡ್ ಸ್ಟೋರೇಜ್ ವಿದ್ಯುತ್ ಯೋಜನೆ ವಿರೋಧಿಸಿ, ಇತ್ತೀಚೆಗಷ್ಟೇ ಅಹೋರಾತ್ರಿ ಧರಣಿ ನಡೆಸಿದ್ದ ರಾಷ್ಟ್ರಭಕ್ತರ ಬಳಗ ಹಾಗೂ ಪರಿಸರಕ್ಕಾಗಿ ನಾವು ಸಂಘಟನೆ ಏಪ್ರಿಲ್ 16ರಂದು ಮತ್ತೊಂದು ಹಂತದ ಪ್ರತಿಭಟನೆಗೆ ಮುಂದಾಗಲಿವೆ.

ಈ ಕುರಿತು ಶುಕ್ರವಾರದಂದು ಶಿವಮೊಗ್ಗ ಪ್ರೆಸ್ಟ್ರಸ್ಟ್ ಪತ್ರಿಕಾಭವನದಲ್ಲಿ ಜಂಟಿ ಸುದ್ದಿಗೋಷ್ಠಿ ನಡೆಸಿದ ಮಾಜಿ ಡಿಸಿಎಂ ಕೆ ಎಸ್ ಈಶ್ವರಪ್ಪ ಹಾಗೂ ಪರಿಸರಕ್ಕಾಗಿ ನಾವು ಸಂಘಟನೆಯ ಮುಖ್ಯಸ್ಥ ಪ್ರೊ. ಎಲ್.ಕೆ.ಶ್ರೀಪತಿ, ಏಪ್ರಿಲ್ 16 ರಂದು ನಗರದಲ್ಲಿ ಬೈಕ್ ಹಾಗೂ ಸೈಕಲ್ ಮತ್ತು ಕಾರಿನ ಜಾಥಾ ನಡೆಸುವ ಮೂಲಕ ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ ಬಗ್ಗೆ ಜನಜಾಗೃತಿ ಮೂಡಿಸಲಾಗುವುದು ಎಂದು ಹೇಳಿದರು.
ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಮೇಲೆ ಒತ್ತಡ ತರಲು ಸಮಾನ ಮನಸ್ಥ ಪರಿಸರಾಸಕ್ತ ಸಂಘ ಸಂಸ್ಥೆಗಳೆಲ್ಲ ಒಗ್ಗೂಡಿ ಚರ್ಚಿಸಿ ಮತ್ತಷ್ಟು ಹೋರಾಟದ ರೂಪ-ರೇಷೆ ನಿರ್ಧರಿಸುವುದಾಗಿ ತಿಳಿಸಿದರು.
ಪ್ರಸ್ತುತ ಶರಾವತಿ ಯೋಜನೆ ವಿರುದ್ದದ ಹೋರಾಟಕ್ಕೆ ರಾಜ್ಯಾದ್ಯಂತದಿಂದ ಸಾಕಷ್ಟು ಬೆಂಬಲ ಸಿಕ್ಕಿದ್ದು, ಹಲವು ಪರಿಸರಾಸಕ್ತ ಸಂಘ ಸಂಸ್ಥೆಗಳು, ಖ್ಯಾತ ಪರಿಸರವಾದಿಗಳು ಕೈಜೋಡಿಸಿರುವುದು ಮತ್ತಷ್ಟು ಹೋರಾಟಕ್ಕೆ ಸ್ಫೂರ್ತಿ ಸಿಕ್ಕಂತಾಗಿದೆ ಎಂದರು.
ಶರಾವತಿ ಪಂಪ್ ಸ್ಟೋರೇಜ್ ಯೋಜನೆಯನ್ನು ಕೈಬಿಡದಿದ್ದರೆ ಮುಂದಿನ ದಿನಗಳಲ್ಲಿ ಇನ್ನೂ ತೀವ್ರ ಸ್ವರೂಪದ ಹೋರಾಟಗಳನ್ನು ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ರಾಷ್ಟ್ರಭಕ್ತ ಬಳಗದ ಪ್ರಮುಖ ಕೆ.ಇ.ಕಾಂತೇಶ್, ಈ. ವಿಶ್ವಾಸ್ ಮತ್ತಿತರರು ಉಪಸ್ಥಿತರಿದ್ದರು.
ವರದಿ: ಸೌಮ್ಯ ರೆಡ್ಡಿ
ಬ್ಯುರೋ ಚೀಫ್
ನ್ಯೂಇಂಡಿಯಾ ಕನ್ನಡ
ಶಿವಮೊಗ್ಗ.







