Himachal Pradeshದಲ್ಲಿ ಪ್ರವಾಹ ಪರಿಸ್ಥಿತಿ ಮೇಘಸ್ಫೋಟ-ಪ್ರಧಾನಿ ವೈಮಾನಿಕ ಸಮೀಕ್ಷೆ-1500 ಕೋಟಿರೂ. ಪರಿಹಾರ-Modi
ಪ್ರವಾಹ ಮತ್ತು ಪ್ರಕೃತಿ ವಿಕೋಪದಲ್ಲಿ ಮೃತಪಟ್ಟವರ ಹತ್ತಿರದ ಸಂಬಂಧಿಕರಿಗೆ 2 ಲಕ್ಷ ರೂ. ಮತ್ತು ಗಂಭೀರವಾಗಿ ಗಾಯಗೊಂಡವರಿಗೆ 50,000 ರೂ. ಪರಿಹಾರವನ್ನು ಇದೇ ವೇಳೆ ಪ್ರಧಾನಿ ಮೋದಿ ಘೋಷಿಸಿದರು.
ಹಿಮಾಚಲ ಪ್ರದೇಶದಲ್ಲಿ ಉಂಟಾದ ಪ್ರವಾಹ ಪರಿಸ್ಥಿತಿ , ಮೇಘಸ್ಫೋಟ, ಮಳೆ ಮತ್ತು ಭೂಕುಸಿತದಿಂದ ಉಂಟಾದ ಹಾನಿಯನ್ನು ಪ್ರಧಾನಿ ನರೇಂದ್ರ ಮೋದಿ ಮಂಗಳವಾರದಂದು ವೈಮಾನಿಕ ಸಮೀಕ್ಷೆ ನಡೆಸುವ ಮೂಲಕ ಪರಿಶೀಲನೆ ನಡೆಸಿದರು.

ಬಳಿಕ, ಕಾಂಗ್ರಾದಲ್ಲಿ ಅಧಿಕೃತ ಸಭೆ ನಡೆಸಿದರು. ಈ ಸಂದಭ೯ದಲ್ಲಿ ಹಿಮಾಚಲ ಪ್ರದೇಶದಲ್ಲಿ ಕೈಗೊಂಡ ಪರಿಹಾರ ಮತ್ತು ಪುನರ್ವಸತಿ ಕ್ರಮಗಳನ್ನು ಪರಿಶೀಲನೆ ನಡೆಸಿದ ಅವರು ಆಗಿರುವ ಹಾನಿಯ ಪ್ರಮಾಣದ ಬಗ್ಗೆ ಮಾಹಿತಿ ಪಡೆದರು.
ಇನ್ನು ಹಾನಿಗೀಡಾದ ಇಡೀ ಪ್ರದೇಶ ಮತ್ತು ಜನರನ್ನು ಮತ್ತೆ ಸಹಜ ಸ್ಥಿತಿಗೆ ತರಲು ಬಹು ಆಯಾಮದ ದೃಷ್ಟಿಕೋನದಿಂದ ತೀವ್ರಗತಿಯಲ್ಲಿ ಕ್ರಮ ಕೈಗೊಳ್ಳಬೇಕೆಂದು ಪ್ರಧಾನಿ ಮೋದಿ ಸೂಚನೆ ನೀಡಿದರು.
ಇದೇ ವೇಳೆ ಹಾನಿಗೀಡಾದ ಪ್ರದೇಶಕ್ಕೆ 1500 ಕೋಟಿ ರೂ.ಗಳ ಆರ್ಥಿಕ ಸಹಾಯವನ್ನು ಘೋಷಿಸಿದ ಪ್ರಧಾನಿ ಮೋದಿ ಅವರು, ಎಸ್ಡಿಆರ್ಎಫ್ ಮತ್ತು ಪಿಎಂ ಕಿಸಾನ್ ಸಮ್ಮಾನ್ ನಿಧಿಯ ಎರಡನೇ ಕಂತಿನ ಮುಂಗಡ ಹಣವನ್ನು ಬಿಡುಗಡೆ ಮಾಡಲಾಗುವುದು ಎಂದು ಭರವಸೆ ನೀಡಿದರು.
ಪ್ರಧಾನಮಂತ್ರಿ ಆವಾಸ್ ಯೋಜನೆಯ ಮೂಲಕ ಮನೆಗಳ ಪುನರ್ನಿರ್ಮಾಣ, ರಾಷ್ಟ್ರೀಯ ಹೆದ್ದಾರಿಗಳ ಪುನಃಸ್ಥಾಪನೆ, ಶಾಲೆಗಳ ಪುನರ್ನಿರ್ಮಾಣ, ಪಿಎಂಎನ್ಆರ್ಎಫ್ ಅಡಿಯಲ್ಲಿ ಪರಿಹಾರ ಒದಗಿಸುವುದು ಮತ್ತು ಜಾನುವಾರುಗಳಿಗೆ ಮಿನಿ ಕಿಟ್ಗಳನ್ನು ಬಿಡುಗಡೆ ಮಾಡುವದಾಗಿ ಭರವಸೆ ನೀಡಿದರು.
ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿಯಲ್ಲಿ, ಹಾನಿಗೊಳಗಾದ ಮನೆಗಳ ಜಿಯೋಟ್ಯಾಗಿಂಗ್ ಮಾಡಲಾಗುವುದು ಎಂದು ಪ್ರಧಾನಿ ಮೋದಿ, ಇದು ನಿಖರವಾದ ಹಾನಿಯ ಮೌಲ್ಯಮಾಪನ ಮತ್ತು ಪೀಡಿತರಿಗೆ ಸಹಾಯವನ್ನು ತ್ವರಿತವಾಗಿ ತಲುಪಿಸಲು ಸಹಾಯ ಮಾಡುತ್ತದೆ ಎಂದು ತಿಳಿಸಿದರು.
ಈಗಾಗಲೇ ಹಿಮಾಚಲ ಪ್ರದೇಶಕ್ಕೆ ಭೇಟಿ ನೀಡಿ ಹಾನಿಯ ಪ್ರಮಾಣವನ್ನು ನಿರ್ಣಯಿಸಲು ಅಂತರ-ಸಚಿವಾಲಯ ಕೇಂದ್ರ ತಂಡಗಳನ್ನು ಕಳುಹಿಸಿದ್ದು, ಅವರು ನೀಡುವ ವಿವರವಾದ ವರದಿಯ ಆಧಾರದ ಮೇಲೆ ಹೆಚ್ಚಿನ ಸಹಾಯವನ್ನು ಪರಿಗಣನೆಗೆ ತೆಗೆದುಕೊಳ್ಳಲಾಗುವುದು ಎಂದು ಸಭೆಯಲ್ಲಿ ತಿಳಿಸಿದರು.
ಸಂತ್ರಸ್ಥ ಕುಟುಂಬದವರೊಂದಿಗೆ ಪ್ರಧಾನಿ ಮೋದಿ ಭೇಟಿ-ಸಾಂತ್ವನ

ವಿಪತ್ತಿನಿಂದ ಹಾನಿಗೊಳಗಾದ ಕುಟುಂಬಗಳನ್ನು ಪ್ರಧಾನಿ ನರೇಂದ್ರ ಮೋದಿ ಭೇಟಿ ಮಾಡಿದ ಅವರು ಜೀವ ಕಳೆದುಕೊಂಡವರ ಕುಟುಂಬ ಸದಸ್ಯರಿಗೆ ತಮ್ಮ ಸಂತಾಪ ಮತ್ತು ತೀವ್ರ ದುಃಖ ವ್ಯಕ್ತಪಡಿಸಿದರು.
ಈ ಕಷ್ಟದ ಸಮಯದಲ್ಲಿ ಕೇಂದ್ರ ಸರ್ಕಾರವು ರಾಜ್ಯ ಸರ್ಕಾರದೊಂದಿಗೆ ನಿಕಟವಾಗಿ ಕಾರ್ಯನಿರ್ವಹಿಸುತ್ತದೆ ಮತ್ತು ಸಾಧ್ಯವಿರುವ ಎಲ್ಲ ಸಹಾಯವನ್ನು ನೀಡುತ್ತದೆ ಎಂದು ಅಭಯ ನೀಡಿದರು.
ಪ್ರವಾಹ ಮತ್ತು ಪ್ರಕೃತಿ ವಿಕೋಪದಲ್ಲಿ ಮೃತಪಟ್ಟವರ ಹತ್ತಿರದ ಸಂಬಂಧಿಕರಿಗೆ 2 ಲಕ್ಷ ರೂ. ಮತ್ತು ಗಂಭೀರವಾಗಿ ಗಾಯಗೊಂಡವರಿಗೆ 50,000 ರೂ. ಪರಿಹಾರವನ್ನು ಇದೇ ವೇಳೆ ಪ್ರಧಾನಿ ಮೋದಿ ಘೋಷಿಸಿದರು.
ಇತ್ತೀಚಿನ ಪ್ರವಾಹ ಮತ್ತು ಭೂಕುಸಿತಗಳಿಂದ ಅನಾಥರಾದ ಮಕ್ಕಳಿಗೆ ಪಿಎಂ ಕೇರ್ಸ್ ಫಾರ್ ಚಿಲ್ಡ್ರನ್ ಯೋಜನೆಯಡಿಯಲ್ಲಿ ಸಮಗ್ರ ಬೆಂಬಲವನ್ನು ನೀಡಲಾಗುವುದು ಎಂದು ಹೇಳಿದ ಮೋದಿ, ಇದು ಅವರ ದೀರ್ಘಕಾಲೀನ ಕಲ್ಯಾಣವನ್ನು ಖಚಿತಪಡಿಸುತ್ತದೆ ಎಂದರು.
ತ್ವರಿತಗತಿಯಲ್ಲಿ ವಿಪತ್ತು ನಿವ೯ಹಣೆಗೆ ಶ್ಲಾಘಿಸಿದ ಮೋದಿ
ಹಿಮಾಚಲದಲ್ಲಿ ಉಂಟಾದ ಹಠಾತ ವಿಪತ್ತು ಸಂಭವಿಸಿದಾಗ, ತಕ್ಷಣ ಪರಿಹಾರ ಕಾಯ೯ ಕೈಗೊಂಡ ಎನ್ಡಿಆರ್ಎಫ್, ಎಸ್ಡಿಆರ್ಎಫ್, ಸೇನೆ, ರಾಜ್ಯ ಆಡಳಿತ ಮತ್ತು ಇತರ ಸೇವಾ-ಆಧಾರಿತ ಸಂಸ್ಥೆಗಳ ಸಿಬ್ಬಂದಿಯ ಪ್ರಯತ್ನಗಳನ್ನು ಪ್ರಧಾನಿ ಮೋದಿ ಇದೇ ವೇಳೆ ಶ್ಲಾಘಿಸಿದರು.

ರಾಜ್ಯದ ಜ್ಞಾಪಕ ಪತ್ರ ಮತ್ತು ಕೇಂದ್ರ ತಂಡಗಳ ವರದಿಯ ಆಧಾರದ ಮೇಲೆ ಕೇಂದ್ರ ಸರ್ಕಾರವು ಮೌಲ್ಯಮಾಪನವನ್ನು ಮತ್ತಷ್ಟು ಪರಿಶೀಲನೆ ನಡೆಸಲಿದೆ ಎಂದು ಹೇಳಿದರು.
ಹಿಮಾಚಲದ ಸದ್ಯದ ವಿಪತ್ತು ಪರಿಸ್ಥಿತಿಯ ಗಂಭೀರತೆಯನ್ನು ಒಪ್ಪಿಕೊಂಡ ಪ್ರಧಾನಿ ಮೋದಿ , ಪರಿಸ್ಥಿತಿಯನ್ನು ಬಗೆಹರಿಸಲು ಕೇಂದ್ರ ಸರ್ಕಾರ ಎಲ್ಲಾ ಪ್ರಯತ್ನಗಳನ್ನು ಮಾಡುತ್ತದೆ ಎಂದು ಭರವಸೆ ನೀಡಿದರು.
ಇದೇ ವೇಳೆ ಹಿಮಾಚಲ ಪ್ರದೇಶದ ಮುಖ್ಯಮಂತ್ರಿ ಸುಖವಿಂದರ್ ಸಿಂಗ್ ಸುಖು, ಸ್ಥಳೀಯ ಸಂಸದರು ಹಾಗು ಇತರೆ ಅಧಿಕಾರಿಗಳೊಂದಿಗೆ ಪ್ರಧಾನಿ ನರೇಂದ್ರ ಮೋದಿ ಸಮಾಲೋಚನೆ ನಡೆಸಿದರು.
ಭೂಕುಸಿತ ಹಾಗು ಪ್ರವಾಹದಲ್ಲಿ ಜೀವ ಕಳೆದುಕೊಂಡ ಕುಟುಂಬದವರ ಜೊತೆ ಕೇಂದ್ರ ಸಕಾ೯ರವಿದ್ದು, ಪರಿಸ್ಥಿತಿ ನಿವ೯ಹಣೆಗೆ ಕೇಂದ್ರ ಸಕಾ೯ರವು ಹಿಮಾಚಲ ರಾಜ್ಯಕ್ಕೆ ಸಂಪೂಣ೯ ಸಹಾಯ ನೀಡಲಿದೆ ಎಂದು ಅಭಯ ನೀಡಿದರು.

ವರದಿ: ಡಾ.ಮಹೇಶ ವಾಳ್ವೇಕರ್
ಹಿರಿಯ ಪತ್ರಕರ್ತರು.
ಮಾಧ್ಯಮ ತಜ್ಞರು, ಮಾಧ್ಯಮ ಸಲಹೆಗಾರರು.
ಬೆಂಗಳೂರು.


