ಕುವೆಂಪು ವಿವಿ ಮೌಲ್ಯಮಾಪನದಲ್ಲಿ ಅಕ್ರಮ ನಡೆದಿಲ್ಲ-ಶರತ್ ಅನಂತಮೂರ್ತಿ|ಫಲಿತಾಂಶದ ಪೂರ್ತಿ ಮಾಹಿತಿಗೆ ಮಿಡೀಯಾ ಬುಲೆಟಿನ್-ಕುಲಸಚಿವ ಎನ್ ಹೇಮಂತ್
ಆಂತರಿಕ ಅಂಕಗಳು ಹಾಜರಾತಿ, ಮಾಹಿತಿ ಒದಗಿಸಲು ಕಾಲೇಜುಗಳಿಂದಲೇ ವಿಳಂಬವಾಗಿದ್ದು, ತಂತ್ರಜ್ಞಾನ ಬಳಕೆಯಲ್ಲೂ ತಪ್ಪಾಗಿದೆ ಎಂದು ಉಪಕುಲಪತಿ ಶರತ್ ಅನಂತಮೂರ್ತಿ ಒಪ್ಪಿಕೊಂಡರು.

ಶಿವಮೊಗ್ಗ: ಫಲಿತಾಂಶದ ಬಗೆಗಿನ ಗೊಂದಲ ನಿವಾರಿಸಲು ವಿಷಯವಾರು ಮೌಲ್ಯಮಾಪನ ಎಷ್ಟು ಮುಗಿದಿದೆ ಫಲಿತಾಂಶ ಯಾವಾಗ ಪ್ರಕಟಣೆಯಾಗುತ್ತೆ ಎಂಬುದರ ಕುರಿತು ಮೀಡಿಯಾ ಬುಲೆಟಿನ್ ಮೂಲಕ ಜಾಗೃತಿ ಮೂಡಿಸಲಾಗುವುದು ಎಂದು ಕುವೆಂಪು ವಿವಿ ಆಡಳಿತ ಕುಲಸಚಿವ ಎನ್ ಹೇಮಂತ್ ತಿಳಿಸಿದರು.

ಸೋಮವಾರದಂದು ಮಾಧ್ಯಮದವರನ್ನುದ್ದೇಶಿಸಿ ಮಾತನಾಡಿದ ಅವರು, ಡಿಜಿಟಲ್ ಮೌಲ್ಯಮಾಪನದ ಎಡವಟ್ಟು ಹಾಗೂ ಪದವಿ ಅಂಕಪಟ್ಟಿ ವಿತರಣೆ ದೂರುಗಳ ಬಗ್ಗೆ ಹಲವು ಪರಿಹಾರತ್ಮಕ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಹೇಳಿದರು.
ಅಂಕಪಟ್ಟಿ ಡೌನ್ಲೋಡ್ ಬಗ್ಗೆ ವಿದ್ಯಾರ್ಥಿಗಳಿಗೆ ಜಾಗೃತಿ!
ನಕಲಿ ಅಂಕಪಟ್ಟಿ , ಅಂಕಪಟ್ಟಿ ವಿತರಣೆ ಅಕ್ರಮಗಳ ತಡೆಗೆ ದೇಶದ ಎಲ್ಲಾ ವಿವಿಗಳಲ್ಲೂ ಅಂಕಪಟ್ಟಿಯ ಹಾರ್ಡ್ ಕಾಪಿ ವಿತರಿಸುವಂತಿಲ್ಲ ಎಂದು ಯೂಜಿಸಿ ನಿಯಮವೇ ಇದೆ ಎಂದು ಕುವೆಂಪು ವಿವಿ ಆಡಳಿತ ಕುಲಸಚಿವ ಎನ್ ಹೇಮಂತ್ ತಿಳಿಸಿದ್ದಾರೆ.

ನ್ಯಾಷನಲ್ ಅಕಾಡೆಮಿಕ್ ಡೆಪಾಸಿಟರಿ ಮೂಲಕವೇ ವಿದ್ಯಾರ್ಥಿಗಳು ಅಂಕಪಟ್ಟಿ ಡೌನ್ಲೋಡ್ ಮಾಡಿಕೊಳ್ಳಬೇಕಿದೆ ಎಂದರು.
ಈ ಬಗ್ಗೆ ಹೆಚ್ಚಿನ ಅರಿವು ಮೂಡಿಸಲು ಯೂಟ್ಯೂಬ್ ವೀಡಿಯೋ ಮೂಲಕ ಎಲ್ಲಾ ಕಾಲೇಜುಗಳಲ್ಲೂ ವಿದ್ಯಾರ್ಥಿಗಳು ಹೇಗೆ ಲಾಗ್ ಇನ್ ಅಗಬೇಕು, ಯಾವ ರೀತಿ ಅಂಕಪಟ್ಟಿ ಡೌನ್ಲೋಡ್ ಮಾಡಿಕೊಳ್ಳಬೇಕೆಂಬ ಹಂತ ಹಂತದ ಜಾಗೃತಿ ಮೂಡಿಸಲಾಗುವುದು ಎಂದು ತಿಳಿಸಿದರು.
ಈ ಹಿಂದೆ ಡಿಜಿಟಲ್ ಮೌಲ್ಯಮಾಪನದ ಸಾಫ್ಟವೇರನಲ್ಲಿ ಆದ ಎಡವಟ್ಟು ಸರಿಪಡಿಸಲಾಗಿದೆ ಎಂದು ಹೇಳಿದರು. ಲೋಪವೆಸಗಿದವರ ಬಗ್ಗೆ ತನಿಖೆ ನಡೆಸಿ ವರದಿ ನೀಡಲು ಸಮಿತಿ ರಚಿಸಲಾಗಿದ್ದು ವರದಿ ಆಧರಿಸಿ ಕ್ರಮಕೈಗೊಳ್ಳಲಾವುವುದು ಎಂದರು.

ಇದೇ ವೇಳೆ ಉಪಸ್ಥಿತರಿದ್ದ ಕುವೆಂಪು ವಿವಿ ಉಪಕುಲಪತಿ ಶರತ್ ಅನಂತಮೂರ್ತಿ, ವಿವಿ ಮೌಲ್ಯಮಾಪನದಲ್ಲಿ ಪಾರದರ್ಶಕತೆ ಸುಧಾರಣೆ ತರುವ ನಿಟ್ಟಿನಲ್ಲಿ ಡಿಜಿಟಲ್ ಮೌಲ್ಯಮಾಪನ ವ್ಯವಸ್ಥೆ ಅಳವಡಿಸಿಕೊಳ್ಳಲಾಗಿದೆ.
ಹೊಸ ಸಾಫ್ಟ್ ವೇರ್ ಬಳಕೆಯಲ್ಲಿ ಸುಧಾರಣೆ ತಂದು ಫಲಿತಾಂಶ ವಿಳಂಬಕ್ಕೆ ಮುಂದಿನ ದಿನಗಳಲ್ಲಿ ಬ್ರೇಕ್ ಹಾಕಲಾಗುವುದು ಎಂದು ತಿಳಿಸಿದರು.
ಮೌಲ್ಯಮಾಪನದಲ್ಲಿ ಅಕ್ರಮವಾಗಿದೆ ಎಂಬುದನ್ನ ಅಲ್ಲಗಳೆದ ಅವರು ಆಂತರಿಕ ಅಂಕಗಳು ಹಾಜರಾತಿ, ಮಾಹಿತಿ ಒದಗಿಸಲು ಕಾಲೇಜುಗಳಿಂದಲೇ ವಿಳಂಬವಾಗಿದ್ದು, ತಂತ್ರಜ್ಞಾನ ಬಳಕೆಯಲ್ಲೂ ತಪ್ಪಾಗಿದೆ ಎಂದು ಉಪಕುಲಪತಿ ಶರತ್ ಅನಂತಮೂರ್ತಿ ಒಪ್ಪಿಕೊಂಡರು.
ಈಗಾಗಲೇ 16,500 ಫಲಿತಾಂಶ ವಿಳಂಬ ಪ್ರಕರಣಗಳನ್ನ ಬಗೆಹರಿಸಿದ್ದು 1500 ಪ್ರಕರಣಗಳು ಮಾತ್ರ ಬಾಕಿ ಇವೆ. ಶೀಘ್ರದಲ್ಲೇ ಎಲ್ಲವೂ ಸರಿಹೋಗಲಿದೆ ಎಂದು ಭರವಸೆ ನೀಡಿದರು.
ವರದಿ: ಸೌಮ್ಯ ರೆಡ್ಡಿ
ಬ್ಯುರೋ ಚೀಫ್
ನ್ಯೂಇಂಡಿಯ ಕನ್ನಡ
ಶಿವಮೊಗ್ಗ.







