ಆನ್ಲೈನ್ ಔಷಧ ಮಾರಾಟಕ್ಕೆ ವಿರೋಧ|ವ್ಯಾಪಾರಿಗಳಿಂದ ದೇಶಾದ್ಯಂತ ಮುಷ್ಕರ|ಮೆಡಿಕಲ್ ಶಾಪ್ಗಳು ಬಹುತೇಕ ಬಂದ್ ಸಾಧ್ಯತೆ?|
ದೇಶದ ಸುಮಾರು 12 ಲಕ್ಷ ಔಷಧಿ ವ್ಯಾಪಾರಸ್ಥರು ಈ ಉದ್ಯಮದ ಮೇಲೆ ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಅವಲಂಬಿತವಾಗಿದ್ದು, ಔಷಧ ಮಳಿಗೆ ಬಂದ್ ಮಾಡಿ ಮುಷ್ಕರ ನಡೆಸುವ ಮೂಲಕ ಕೇಂದ್ರ ಸರ್ಕಾರದ ಗಮನ ಸೆಳೆಯುತ್ತಿರುವುದಾಗಿ ಅಧ್ಯಕ್ಷ ಎಸ್ ಪಿ ಮಧುಕರ್ ಹೇಳಿದರು.

ಶಿವಮೊಗ್ಗ : ಆನ್ಲೈನ್ನಲ್ಲಿ ಔಷಧ ಮಾರಾಟ ಮಾಡುವದನ್ನು ವಿರೋಧಿಸಿ ಮೇ 20 ರಂದು ಭಾರತೀಯ ಔಷಧ ವ್ಯಾಪಾರಿಗಳ ಮಾರಾಟ ಮತ್ತು ವಿತರಕರ ಸಂಘ ದೇಶಾದ್ಯಂತ ಕರೆ ನೀಡಿರುವ ಮುಷ್ಕರಕ್ಕೆ ಶಿವಮೊಗ್ಗ ಜಿಲ್ಲಾ ಔಷಧ ವ್ಯಾಪಾರಿಗಳ ಸಂಘದ ಔಷಧ ವ್ಯಾಪಾರಿಗಳ ಸಂಘ ಬೆಂಬಲ ಘೋಷಿಸಿದೆ.

ಈ ಹಿನ್ನೆಲೆಯಲ್ಲಿ ಬುಧವಾರದಂದು ಶಿವಮೊಗ್ಗದ ಬಹುತೇಕ ಔಷಧ ಮಾರಾಟ ಮಳಿಗೆಯ ಬಾಗಿಲುಗಳು ಮುಚ್ಚಲಿವೆ ಎಂದು ಅಧ್ಯಕ್ಷ ಎಸ್ ಪಿ ಮಧುಕರ್ ತಿಳಿಸಿದರು.
ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಆನ್ಲೈನ್ ನಲ್ಲಿ ನಿಯಂತ್ರಣವಿಲ್ಲದೆ ಔಷಧ ಮಾರಾಟ ನಡೆಯುತ್ತಿದ್ದು ಯುವಪೀಳಿಗೆ ಮಾದಕ ಔಷಧಗಳ ವ್ಯಸನಿಗಳಾಗುತ್ತಿದ್ದಾರೆ ಎಂದು ಆರೋಪಿಸಿದರು.
ಕೂಡಲೇ ಕೇಂದ್ರ ಸರ್ಕಾರ ಆನ್ ಲೈನ್ ಔಷಧ ಮಾರಾಟಕ್ಕೆ ನೀಡಿದ್ದ ಅನುಮತಿ ಹಿಂಪಡೆಯಬೇಕು ಎಂದು ಆಗ್ರಹಿಸಿದರು.
ತುರ್ತು ಚಿಕಿತ್ಸೆಗಳಿಗೆ ಅಡಚಣೆಯಿಲ್ಲ !
ಆಸ್ಪತ್ರೆಗಳ ಔಷಧ ಮಳಿಗೆ ಮತ್ತು ಕ್ಲಿನಿಕ್ಗಳ ಔಷಧ ಮಳಿಗೆ ಮಾತ್ರ ಕಾರ್ಯನಿರ್ವಹಿಸಲಿದೆ ಎಂದು ಹೇಳಿರುವ ಅವರು, ರೋಗಿಗಳ ತುರ್ತು ಚಿಕಿತ್ಸಗೆ ಅಡಚಣೆಯಿಲ್ಲ ಎಂದರು.
ಔಷಧ ವಿತರಣಾ ವ್ಯವಸ್ಥೆಯ ಶುದ್ದೀಕರಣ ಮತ್ತು ಸಾಂಪ್ರದಾಯಿಕ ಸಮುದಾಯ ಔಷಧ ವ್ಯಾಪರಿಗಳ ಅಸ್ಥಿತ್ವಕ್ಕಾಗಿ ಹೋರಾಟವೇ ಹೊರತು ರೋಗಿಗಳ ವಿರುದ್ದ ಅಲ್ಲ ಎಂದು ತಿಳಿಸಿದರು.
ಕೋವಿಡ್ ಸಂದರ್ಭದಲ್ಲಿ ತಾತ್ಕಾಲಿಕವಾಗಿ ಆನ್ ಲೈನ್ ಔಷಧ ಮಾರಾಟಕ್ಕೆ ಅವಕಾಶ ನೀಡಲಾಗಿತ್ತು.
ಇದೀಗ ಡ್ರಗ್ಸ್ ಕಂಟ್ರೋಲ್ ಇಲಾಖೆಯ ನಿಯಮ ಗಾಳಿಗೆ ತೂರಿ, ರಿಯಾಯಿತಿ ದರದಲ್ಲಿ ಆನ್ ಲೈನ್ ಔಷಧ ಮಾರಾಟ ಎಗ್ಗಿಲ್ಲದೇ ಸಾಗಿದೆ.
ಯುವಕರು ಆನ್ಲೈನ್ ವೇದಿಕೆಗಳ ಮೂಲಕ ಮಾದಕ ಔಷಧಿಗಳನ್ನು ದುರುಪಯೋಗಪಡಿಸಿಕೊಳ್ಳುತ್ತಿರುವ ಬಗ್ಗೆ ಕೇಂದ್ರ ಸರ್ಕಾರ ಗಂಭೀರವಾಗಿ ಚಿಂತಿಸಬೇಕಿದೆ.
ದೇಶದ ಸುಮಾರು 12 ಲಕ್ಷ ಔಷಧಿ ವ್ಯಾಪಾರಸ್ಥರು ಈ ಉದ್ಯಮದ ಮೇಲೆ ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಅವಲಂಬಿತವಾಗಿದ್ದು, ಔಷಧ ಮಳಿಗೆ ಬಂದ್ ಮಾಡಿ ಮುಷ್ಕರ ನಡೆಸುವ ಮೂಲಕ ಕೇಂದ್ರ ಸರ್ಕಾರದ ಗಮನ ಸೆಳೆಯುತ್ತಿರುವುದಾಗಿ ಅಧ್ಯಕ್ಷ ಎಸ್ ಪಿ ಮಧುಕರ್ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಸಂಘದ ಕಾರ್ಯದರ್ಶಿ ಈ ಜಿ ವೆಂಕಟೇಶ, ಜಂಟಿ ಕಾರ್ಯದರ್ಶಿ ಎಂ ಎಲ್ ಮಂಜುನಾಥ, ಖಜಾಂಚಿ ಕೆ ಸಿ ನಾಗರಾಜ, ಪದಾಧಿಕಾರಿಗಳಾದ ಚಂದ್ರಶೇಖರ್ ವಿವೇಕಾನಂದ ನಾಯಕ, ರಮೇಶ್, ಪ್ರಕಾಶ್, ಖಯ್ಯೂಮ್ ಉಪಸ್ಥಿತರಿದ್ದರು.
ವರದಿ: ಸೌಮ್ಯ ರೆಡ್ಡಿ
ಬ್ಯುರೋ ಚೀಫ್
ನ್ಯೂಇಂಡಿಯಾ ಕನ್ನಡ
ಶಿವಮೊಗ್ಗ.







