ಶಿವಮೊಗ್ಗದಲ್ಲಿ ಮೇ 17ರಂದು ಶ್ರೀ ಜಗದ್ಗುರು ಪಂಚಪೀಠಾಧೀಶ್ವರರ ಅಡ್ಡಪಲ್ಲಕ್ಕಿ ಮಹೋತ್ಸವ|ಬೃಹತ್ ಧರ್ಮಜಾಗೃತಿ ಸಮಾವೇಶದಲ್ಲಿ ಬಿಎಸ್ವೈಗೆ ಕೃತಜ್ಞತಾ ಸಮರ್ಪಣೆ
100ಕ್ಕೂ ಹೆಚ್ಚು ಮಠಾಧಿಪತಿಗಳು ಅಪರೂಪದ ಅಡ್ಡಪಲ್ಲಕ್ಕಿ ಉತ್ಸವಕ್ಕೆ ಸಾಕ್ಷಿಯಾಗಲಿದ್ದಾರೆ ಎಂದು ತಿಳಿಸಿದ ಆಯನೂರು ಮಂಜುನಾಥ್, ಸಾರ್ವಜನಿಕರು ಜಾತಿ, ಧರ್ಮ, ಭೇದವಿಲ್ಲದೇ ಪಾಲ್ಗೊಂಡು ಕಾರ್ಯಕ್ರಮ ಯಶಸ್ವಿಯಾಗಿಸಬೇಕೆಂದು ಮನವಿ ಮಾಡಿದರು.

ಶಿವಮೊಗ್ಗ: 34ವರ್ಷಗಳ ಬಳಿಕ ಶಿವಮೊಗ್ಗ ನಗರದಲ್ಲಿ ಶ್ರೀ ಜಗದ್ಗುರು ಪಂಚಪೀಠಾಧೀಶ್ವರರ ಅಡ್ಡಪಲ್ಲಕ್ಕಿ ಮಹೋತ್ಸವ ನಡೆಯಲಿದೆ.
ಮೇ 17 ರಂದು ಆಯೋಜಿಸಿರುವ ಅಪರೂಪದ ಅಡ್ಡಪಲ್ಲಕ್ಕಿ ಮಹೋತ್ಸವ ಮತ್ತು ಬೃಹತ್ ಧರ್ಮಜಾಗೃತಿ ಸಮಾವೇಶ ಕಾರ್ಯಕ್ರಮಕ್ಕೆ ಸಕಲ ಸಿದ್ದತೆ ಮಾಡಿಕೊಳ್ಳಲಾಗಿದೆ ಮಾಜಿ ಸಂಸದ ಹಾಗೂ ಅಡ್ಡ ಪಲ್ಲಕ್ಕಿ ಮಹೋತ್ಸವ ಸಮಿತಿ ಕಾರ್ಯಾಧ್ಯಕ್ಷ ಆಯನೂರು ಮಂಜುನಾಥ್ ತಿಳಿಸಿದ್ದಾರೆ.

ಈ ಕುರಿತು ಮಾಧ್ಮಮದವರೊಂದಿಗೆ ಮಾತನಾಡಿದ ಅವರು, ಶ್ರೀ ಜಗದ್ಗುರು ಪಂಚಪೀಠಾಧೀಶ್ವರರ ಅಡ್ಡಪಲ್ಲಕ್ಕಿ ಮಹೋತ್ಸವ ಹಿನ್ನೆಲೆಯಲ್ಲಿ ಹಲವು ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದು ಹೇಳಿದರು.
ಬೃಹತ್ ಅಡ್ಡಪಲ್ಲಕ್ಕಿ ಮೆರವಣಿಗೆ|

ಬಾಳೆಹೊನ್ನೂರಿನ ರಂಭಾಪುರಿ ಪೀಠದ ಡಾ ವೀರಸೋಮೇಶ್ವರ ರಾಜದೇಶೀಕೇಂದ್ರ ಶಿವಾಚಾರ್ಯರು, ಉತ್ತರಾಖಂಡ ಕೇದಾರಪೀಠದ ಭೀಮಾಶಂಕರಲಿಂಗ ಶಿವಾಚಾರ್ಯ, ಆಂದ್ರದ ಶ್ರೀಶೈಲ ಪೀಠದ ಡಾ ಚನ್ನಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯರು,ಉತ್ತರಪ್ರದೇಶ ವಾರಣಾಸಿ ಕಾಶೀಪೀಠದ ವಿದ್ಯಾವಾಚಸ್ಪತಿ ಡಾ.ಚಂದ್ರಶೇಖರ ಶಿವಾಚಾರ್ಯರಿಗೆ ಪರಂಪರಾಗತ ಪದ್ದತಿ ಅನುಸಾರ ಮೇ 17 ರ ಮಧ್ಯಾಹ್ನ 3 ಗಂಟೆಗೆ ನಗರದ ಗಾಂಧೀಬಜಾರಿನ ಬಸವೇಶ್ವರ ದೇವಾಲಯದಿಂದ ನಗರದ ವಿವಿಧ ಮಾರ್ಗಗಳಲ್ಲಿ ಅಡ್ಡಪಲ್ಲಕ್ಕಿ ಉತ್ಸವದ ಬೃಹತ್ ಮೆರವಣಿಗೆ ನಡೆಯಲಿದೆ ಎಂದು ಹೇಳಿದರು.
ಬೃಹತ್ ಧಾರ್ಮಿಕ ಸಭೆ|
ಅಡ್ಡಪಲ್ಲಕ್ಕಿ ಉತ್ಸವದ ಬೃಹತ್ ಮೆರವಣಿಗೆಯು ಶಿವಪ್ಪನಾಯಕ ವೃತ್ತ , ನೆಹರೂ ರಸ್ತೆ, ಜೈಲ್ ಸರ್ಕಲ್, ಲಕ್ಷ್ಮೀ ಟಾಕೀಸ್ ಮಾರ್ಗಗಳಲ್ಲಿ ಅಲ್ಲಮ ಪ್ರಭುಮೈದಾನದವರೆಗೆ ಅಡ್ಡಪಲ್ಲಕ್ಕಿ ಉತ್ಸವದ ಮೆರವಣಿಗೆ ಸಾಗಿ ಫ್ರೀಡಂಪಾರ್ಕ್ಗೆ ಆಗಮಿಸಲಿದೆ.
ಅಲ್ಲಿ ಬೃಹತ್ ಧಾರ್ಮಿಕ ಸಭೆ ಆಯೋಜಿಸಲಾಗಿದೆ ಎಂದು ಆಯನೂರು ಮಂಜುನಾಥ್ ತಿಳಿಸಿದರು.
ಬಿಎಸ್ವೈ ಅವರಿಗೆ ಕೃತಜ್ಞತಾ ಸಮರ್ಪಣೆ|

ಇನ್ನು ಧಾರ್ಮಿಕ ಸಮಾವೇಶದಲ್ಲಿ ಪಂಚಪೀಠಾಧ್ಯಕ್ಷರ ಸಮ್ಮುಖದಲ್ಲಿ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ನವರಿಗೆ ಕೃತಜ್ಞತಾ ಸಮರ್ಪಣಾ ಸಮಾರಂಭ ನಡೆಯಲಿದೆ ಎಂದು ಹೇಳಿದರು.
ಧಾರ್ಮಿಕ ಸಮಾವೇಶಕ್ಕೆ 25 ಸಾವಿರ ಜನ ಭಾಗಿ!
ಇನ್ನು ಧಾರ್ಮಿಕ ಸಮಾವೇಶದಲ್ಲಿ ಶಿವಮೊಗ್ಗ ಜಿಲ್ಲೆಯಲ್ಲಿರುವ 40 ಕ್ಕೂ ಹೆಚ್ಚು ಮಠಾಧೀಶ್ವರರು ಭಾಗವಹಿಸಲಿದ್ದಾರೆ.
100ಕ್ಕೂ ಹೆಚ್ಚು ಮಠಾಧಿಪತಿಗಳು ಅಪರೂಪದ ಅಡ್ಡಪಲ್ಲಕ್ಕಿ ಉತ್ಸವಕ್ಕೆ ಸಾಕ್ಷಿಯಾಗಲಿದ್ದಾರೆ ಎಂದು ತಿಳಿಸಿದ ಆಯನೂರು ಮಂಜುನಾಥ್, ಸಾರ್ವಜನಿಕರು ಜಾತಿ, ಧರ್ಮ, ಭೇದವಿಲ್ಲದೇ ಪಾಲ್ಗೊಂಡು ಕಾರ್ಯಕ್ರಮ ಯಶಸ್ವಿಯಾಗಿಸಬೇಕೆಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಅಡ್ಡಪಲ್ಲಕ್ಕಿ ಮಹೋತ್ಸವ ಸಮಿತಿ ಪ್ರಧಾನಕಾರ್ಯದರ್ಶಿ ಸಿಎಸ್ ಷಡಾಕ್ಷರಿ, ಶಾಸಕ ಡಾ.ಧನಂಜಯ್ ಸರ್ಜಿ, ಜ್ಯೋತಿಪ್ರಕಾಶ್, ವೀರಶೈವ ಲಿಂಗಾಯತ ಮಹಾಸಭಾದ ಅಧ್ಯಕ್ಷ ರುದ್ರಮುನಿ ಸಜ್ಜನ್, ಬಳ್ಳೇಕೆರೆ ಸಂತೋಷ್, ಅನಿತಾ ರವಿ ಶಂಕರ್ ಮತ್ತಿತರರು ಉಪಸ್ಥಿತರಿದ್ದರು.
ವರದಿ: ಸೌಮ್ಯ ರೆಡ್ಡಿ
ಬ್ಯುರೋ ಚೀಫ್
ನ್ಯೂಇಂಡಿಯಾ ಕನ್ನಡ
ಶಿವಮೊಗ್ಗ







