AgricultureDistrictKarnatakaShivamogga

ತುಂಗಾ ಏತನೀರಾವರಿ ವಿದ್ಯುತ್ ಬಿಲ್ ಬಾಕಿ| ಮೆಸ್ಕಾನಿಂದ ರೈತರಿಗೆ ವಿದ್ಯುತ್‌ ಕಡಿತದ ಬರೆ| ಕೂಡಲೇ ಬಿಲ್‌ ಪಾವತಿಸಲು ರಾಜ್ಯ ಸರ್ಕಾರಕ್ಕೆ ಹೆಚ್. ಬಸವರಾಜಪ್ಪ ಆಗ್ರಹ

ಪುರದಾಳು ಕೆರೆ,ಬಾರೇಹಳ್ಳ, ಗೌಡನಕೆರೆಗಳಿಗೆ ತುಂಗಾ ನದಿಯಿಂದ ಗಾಜನೂರು ಬಳಿ ಏತನೀರಾವರಿ ಮೂಲಕ ನೀರು ತುಂಬಿಸಿ ರೈತರ 7500 ಎಕರೆ ಜಮೀನಿಗೆ ನೀರು ಹರಿಸುವ ಪರಿಪಾಠ ಕಳೆದ 8 ವರ್ಷಗಳಿಂದ ನಡೆಯುತ್ತಿದೆ. ಯೋಜನೆಯ ವಿದ್ಯುತ್ ಬಿಲ್ ಅನ್ನು ಸರ್ಕಾರವೇ ತುಂಬುತ್ತಿತ್ತು. -ಹೆಚ್‌.ಆರ್.ಬಸವರಾಜಪ್ಪ

ರಾಜ್ಯ ಸರ್ಕಾರವು ತುಂಗಾ ಏತನೀರಾವರಿ ವಿದ್ಯುತ್ ಬಿಲ್ ಬಾಕಿ ಉಳಿಸಿಕೊಂಡ ಪರಿಣಾಮ ಮೆಸ್ಕಾಂ ವಿದ್ಯತ್ ಸಂಪರ್ಕ ಕಡಿತಗೊಂಡಿದ್ದು, ಇದರಿಂದ ಶಿವಮೊಗ್ಗ ಜಿಲ್ಲೆಯ 60 ಹಳ್ಳಿಗಳ ರೈತರ ಜಮೀನಿಗೆ ನೀರು ಹರಿಯದಂತಾಗಿದೆ ಎಂದು ರಾಜ್ಯ ರೈತಸಂಘ ಹಸಿರುಸೇನೆ ಅಧ್ಯಕ್ಷ ಹೆಚ್.ಆರ್. ಬಸವರಾಜಪ್ಪ ಹೇಳಿದ್ದಾರೆ.

ಈ ಕೂಡಲೇ ರಾಜ್ಯ ಸರ್ಕಾರ ಬಾಕಿ ಹಣ ಪಾವತಿಸಬೇಕೆಂದು ಅವರು ಒತ್ತಾಯಿಸಿದ್ದಾರೆ.

ಮಂಗಳವಾರ ಶಿವಮೊಗ್ಗ ಪ್ರೆಸ್‌ಟ್ರಸ್ಟ್‌ ಪತ್ರಿಕಾಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತುಂಗಾನದಿಯಲ್ಲಿ ನೀರು ಹರಿಯುತ್ತಿದ್ದರೂ ಜಾಕ್‌ವೆಲ್ನಿಂದ ನೀರೆತ್ತುವುದು ಸ್ಥಗಿತಗೊಂಡು ರೈತರು ಕಂಗಾಲಾಗಿರುವ ಪರಿಸ್ಥಿತಿಯನ್ನು ವಿವರಿಸಿದರು.

ಶಿವಮೊಗ್ಗ ಜಿಲ್ಲೆಯ ಪುರದಾಳು ಕೆರೆ,ಬಾರೇಹಳ್ಳ, ಗೌಡನಕೆರೆಗಳಿಗೆ ತುಂಗಾ ನದಿಯಿಂದ ಗಾಜನೂರು ಬಳಿ ಏತನೀರಾವರಿ ಮೂಲಕ ನೀರು ತುಂಬಿಸಿ ರೈತರ 7500 ಎಕರೆ ಜಮೀನಿಗೆ ನೀರು ಹರಿಸುವ ಪರಿಪಾಠ ಕಳೆದ 8 ವರ್ಷಗಳಿಂದ ನಡೆಯುತ್ತಿದೆ. ಯೋಜನೆಯ ವಿದ್ಯುತ್ ಬಿಲ್ ಅನ್ನು ಸರ್ಕಾರವೇ ತುಂಬುತ್ತಿತ್ತು.

ಪ್ರಸ್ತುತ 25.22 ಕೋಟಿ ರೂ ಬಿಲ್ ಮೊತ್ತವನ್ನು ರಾಜ್ಯ ಸರ್ಕಾರವು ಬಾಕಿ ಉಳಿಸಿಕೊಂಡಿದೆ ಎಂದು ರಾಜ್ಯ ರೈತಸಂಘ ಹಸಿರುಸೇನೆ ಅಧ್ಯಕ್ಷ ಹೆಚ್.ಆರ್. ಬಸವರಾಜಪ್ಪ ಹೇಳಿದರು.

ಹೀಗಾಗಿ ಮೆಸ್ಕಾಂ ವಿದ್ಯುತ್ ಸಂಪರ್ಕ ಕಡಿತಗೊಳಿಸಿದೆ. ತಕ್ಷಣ ಒಂದೆರಡು ಕಂತಿನ ಹಣವನ್ನಾದರೂ ರಾಜ್ಯ ಸರ್ಕಾರವು ಪಾವತಿಸಿದರೆ ಮಾತ್ರ ಮತ್ತೆ ನೀರೆತ್ತಲು ಸಾಧ್ಯವಿದೆ ಎಂದರು.

ಜೂನ್‌ನಿಂದ ಡಿಸೆಂಬರ್‌ವರೆಗೆ ಮಾತ್ರ ಏತನೀರಾವರಿ ನೀರೆತ್ತಲು ಅವಕಾಶವಿದೆ.

ಹೀಗಾಗಿ ಜಿಲ್ಲಾಡಳಿತಕ್ಕೂ ಮನವಿ ಮಾಡಿದ್ದು ಸರ್ಕಾರ ಬಿಲ್ ಬಾಕಿ ಪಾವತಿಸುವ ಮೂಲಕ ಅನ್ನದಾತನ ರಕ್ಷಣೆಗೆ ಧಾವಿಸಬೇಕೆಂದು ಹೆಚ್ ಬಸವರಾಜಪ್ಪ ಒತ್ತಾಯಿಸಿದರು.

ಇದೇ ವೇಳೆ ಗ್ರಾಮಪಂಚಾಯ್ತಿಗಳಲ್ಲಿ ಅಳವಡಿಸಿರುವ ಮಳೆಮಾಪನ ಕೇಂದ್ರಗಳ ಸೆನ್ಸಾರ್ ಯಂತ್ರ ಕೆಟ್ಟು ಹೋಗಿದ್ದು ರೈತರಿಗೆ ನ್ಯಾಯಸಮ್ಮತ ಬೆಳೆ ವಿಮೆ ಪರಿಹಾರಕ್ಕೆ ತೊಡಕುಂಟಾಗಿದೆ ಎಂದು ರಾಜ್ಯ ರೈತಸಂಘ ಹಸಿರುಸೇನೆ ಅಧ್ಯಕ್ಷ ಹೆಚ್.ಆರ್. ಬಸವರಾಜಪ್ಪ ಕಳವಳ ವ್ಯಕ್ತಪಡಿಸಿದರು.

ತಕ್ಷಣವೇ ಹೊಸಯಂತ್ರಗಳನ್ನ ಅಳವಡಿಸುವಂತೆ ಒತ್ತಾಯಿಸಿದರು. ಪ್ರತೀ ವರ್ಷ ರೈತರು ಬೆಳೆಹಾನಿಯಿಂದ ಸುಧಾರಿಸಿಕೊಳ್ಳಲು ಕೋಟ್ಯಾಂತರ ರೂಪಾಯಿಗಳನ್ನ ವಿಮಾ ಕಂಪನಿಗೆ ಕಟ್ಟುತ್ತಾರೆ. ಬೆಳೆ ಹಾನಿ ಪರಿಹಾರಕ್ಕೆ ಮಳೆಮಾಪನ ವರದಿಯೇ ಅಂತಿಮವಾಗಿದೆ.

ಮಾಪನ ಯಂತ್ರಗಳ ದೋಷ,ಕೃಷಿ ಇಲಾಖೆ ನಿರ್ವಹಣಾ ದೋಷದಿಂದಾಗಿ ಕಾಲ್ಪನಿಕ ಮತ್ತು ತಪ್ಪಾದ ಡೇಟಾ ಸರ್ಕಾರದ ಸರ್ವರಗಳಿಗೆ ರವಾನೆಯಾಗುತ್ತದೆ .

ಇದನ್ನೇ ನೆಪವಾಗಿಟ್ಟುಕೊಂಡ ವಿಮಾ ಕಂಪನಿಗಳು ಮಳೆಹಾನಿಯಾಗಿಲ್ಲವೆಂದು ರೈತರ ಹೊಟ್ಟೆ ಮೇಲೆ ಹೊಡೆಯುತ್ತಿವೆ..ರೈತರಿಗೆ ನೀಡಬೇಕಾದ ವಿಮಾ ಹಣವನ್ನ ಲೂಟಿಹೊಡೆಯುತ್ತಿವೆ ಎಂದು ಹೆಚ್.ಆರ್. ಬಸವರಾಜಪ್ಪ ಆರೋಪಿಸಿದರು.

ಪತ್ರಿಕಾಗೋಷ್ಠಿಯಲ್ಲಿ ರಾಜ್ಯ ಉಪಾಧ್ಯಕ್ಷರಾದ ಹಿಟ್ಟೂರು ರಾಜು, ಜಿಲ್ಲಾಧ್ಯಕ್ಷ ಕೆ.ರಾಘವೇಂದ್ರ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಇ.ಬಿ ಜಗದೀಶ್, ಜಿಲ್ಲಾ ಹಸಿರುಸೇನೆ ಸಂಚಾಲಕರಾದ ಎಂ.ಡಿ ನಾಗರಾಜ್, ಗ್ರಾಮಾಂತರ ಅಧ್ಯಕ್ಷ ಕಸಟ್ಟಿ ರುದ್ರೇಶ್,ಶಿವಮೊಗ್ಗ ತಾ. ಅಧ್ಯಕ್ಷ ಸಿ.ಚಂದ್ರಪ್ಪ, ತಾ.ಪ್ರಧಾನ ಕಾರ್ಯದರ್ಶಿ ಜ್ಞಾನೇಶ್, ಭದ್ರಾವತಿ ತಾ. ಅಧ್ಯಕ್ಷ ಜಿ.ಎನ್ ಪಂಚಾಕ್ಷರಿ ಹಾಜರಿದ್ದರು.

Follow Us

Leave a Reply

Your email address will not be published. Required fields are marked *

Back to top button