ಶಿವಮೊಗ್ಗ:ನಾಗಸುಬ್ರಹ್ಮಣ್ಯ ದೇವಾಲಯದಲ್ಲಿ ಭಜನಾ ಮಾಸೋತ್ಸವ|ಪತ್ರಕರ್ತ ಗೋ.ವ. ಮೋಹನಕೃಷ್ಣರಿಂದ ಚಾಲನೆ|ಆಷಾಢ ತಿಂಗಳಿಡೀ ಕಾರ್ಯಕ್ರಮ
ಸಾಮೂಹಿಕವಾಗಿ ಭಜನೆ ಮಾಡುವುದರಿಂದ ನಮ್ಮಲ್ಲಿರುವ ಒತ್ತಡ ಮತ್ತು ಆತಂಕ ದೂರವಾಗಿ, ಮನಸ್ಸಿಗೆ ಅಪಾರ ನೆಮ್ಮದಿ ಸಿಗುತ್ತದೆ ಎಂದು ವೈದ್ಯ ಡಾ. ಚಂದ್ರಶೇಖರ್ ಹೇಳಿದರು.

ಶಿವಮೊಗ್ಗ: ಶಿವಮೊಗ್ಗ ನಾಗಸುಬ್ರಹ್ಮಣ್ಯ ದೇವಾಲಯದಲ್ಲಿ ನಾಗಸುಬ್ರಹ್ಮಣ್ಯ ದೇವಸ್ಥಾನ ಸೇವಾ ಸಮಿತಿ, ಶ್ರೀ ಸ್ವಾಮಿ ವಿವೇಕಾನಂದ ಅಡ್ವೆಂಚರ್ ಮತ್ತು ಸ್ಪೋರ್ಟ್ಸ್ ಕ್ಲಬ್, ಅರ್ಚಕ ವೃಂದ ಮತ್ತು ಭಜನಾ ಪರಿಷತ್ ಇವರ ಸಹಯೋಗದಲ್ಲಿ ಆಷಾಢ ಭಜನಾ ಮಾಸೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.

ಪತ್ರಕರ್ತ ಗೋ.ವ. ಮೋಹನಕೃಷ್ಣ ಅವರು ಭಜನಾ ಮಾಸೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸುವ ಮೂಲಕ ಚಾಲನೆ ನೀಡಿದರು.
ಭಜನಾ ಮಾಸೋತ್ಸವದಲ್ಲಿ ಭಾಗವಹಿಸಿದ್ದ ವೈದ್ಯ ಡಾ. ಚಂದ್ರಶೇಖರ್ ಮಾತನಾಡಿ, ಭಜನೆ ಎಂಬುದು ಕೇವಲ ಹಾಡು ಮತ್ತು ಪ್ರಾರ್ಥನೆಯಲ್ಲ. ಇದು ನಮ್ಮ ಮನಸ್ಸನ್ನು ಶಾಂತಗೊಳಿಸುವ ಮತ್ತು ಭಗವಂತನೊಂದಿಗೆ ನಮ್ಮನ್ನು ಬೆಸೆಯುವ ಆಧ್ಯಾತ್ಮಿಕ ಸಾಧನವಾಗಿದೆ ಎಂದು ಅಭಿಪ್ರಾಯಪಟ್ಟರು.

ಭಜನೆ ಭಾರತೀಯ ಸಂಸ್ಕೃತಿಯ ಪ್ರಮುಖ ಭಾಗವಾಗಿದ್ದು, ಜನರಲ್ಲಿ ಭಕ್ತಿ, ಏಕತೆ ಮತ್ತು ಸಕಾರಾತ್ಮಕ ಶಕ್ತಿಯನ್ನು ಹೆಚ್ಚಿಸುತ್ತದೆ ಎಂದು ಹೇಳಿದರು.

ಸಾಮೂಹಿಕವಾಗಿ ಭಜನೆ ಮಾಡುವುದರಿಂದ ನಮ್ಮಲ್ಲಿರುವ ಒತ್ತಡ ಮತ್ತು ಆತಂಕ ದೂರವಾಗಿ, ಮನಸ್ಸಿಗೆ ಅಪಾರ ನೆಮ್ಮದಿ ಸಿಗುತ್ತದೆ. ಹರಿಕಥೆ, ಕೀರ್ತನೆ ಮತ್ತು ಭಜನೆಗಳ ಮೂಲಕ ನಮ್ಮ ಹಿರಿಯರು ಆಧ್ಯಾತ್ಮಿಕ ಮೌಲ್ಯಗಳನ್ನು ನಮಗೆ ತಿಳಿಸಿಕೊಟ್ಟಿದ್ದಾರೆ ಎಂದರು.
ಶ್ರೀ ನಾಗಸುಬ್ರಹ್ಮಣ್ಯ ದೇವಸ್ಥಾನ ಸೇವಾ ಸಮಿತಿ ಅಧ್ಯಕ್ಷ ರಾಮಲಿಂಗಪ್ಪ ಹೆಚ್., ನಾಗಸುಬ್ರಹ್ಮಣ್ಯ ದೇವಸ್ಥಾನ ಸೇವಾ ಸಮಿತಿ ಕಾರ್ಯದರ್ಶಿ ರಮೇಶ್, ಭಜನಾ ಪರಿಷತ್ ಅಧ್ಯಕ್ಷ, ದೇವಾಲಯದ ಪ್ರಧಾನ ಅರ್ಚಕರಾದ ಸಂದೇಶ್ ಉಪಾಧ್ಯ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ವರದಿ: ಸೌಮ್ಯ ರೆಡ್ಡಿ
ಬ್ಯುರೋ ಚೀಫ್
ನ್ಯೂಇಂಡಿಯಾ ಕನ್ನಡ
ಶಿವಮೊಗ್ಗ







