ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣ|ಶಿವಮೊಗ್ಗದಲ್ಲಿ ಮುಂದುವರೆದ ಪ್ರತಿಭಟನೆ|ಸಚಿವ ನಾಗೇಂದ್ರ ವಜಾ ಮಾಡಿ, ಬಿ.ವೈ.ರಾಘವೇಂದ್ರ ಒತ್ತಾಯ
ಭ್ರಷ್ಟ ಸಚಿವ ನಾಗೇಂದ್ರ ವಜಾ ಆಗುವತನಕ ಹೋರಾಟ ಮುಂದುವರಿಯಲಿದೆ ಎಂದು ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಎಚ್ಚರಿಕೆ ನೀಡಿದರು.

ಶಿವಮೊಗ್ಗ: ರಾಜ್ಯ ವಾಲ್ಮೀಕಿ ಅಭಿವೃದ್ಧಿ ನಿಗಮದ 187 ಕೋಟಿರೂ. ಗುಳುಂ ಮಾಡಿರುವ ಪ್ರಕರಣದ ಆರೋಪ ಎದುರಿಸುತ್ತಿರುವ ಸಚಿವ ಬಿ. ನಾಗೇಂದ್ರ ಅವರನ್ನು ತಕ್ಷಣವೇ ಸಚಿವ ಸಂಪುಟದಿಂದ ವಜಾಗೊಳಿಸಬೇಕೆಂದು ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಒತ್ತಾಯಿಸಿದ್ದಾರೆ.

ಶಿವಮೊಗ್ಗ ಜಿಲ್ಲಾ ಬಿಜೆಪಿ ಘಟಕದ ವತಿಯಿಂದ ಸೋಮವಾರದಿಂದ ಹಮ್ಮಿಕೊಳ್ಳಲಾದ ಅನಿರ್ದಿಷ್ಟಾವಧಿ ನಿರಂತರ ಧರಣಿ ಸತ್ಯಾಗ್ರಹದಲ್ಲಿ ಮಂಗಳವಾರದಂದು ಪಾಲ್ಗೊಂಡು ಅವರು ಮಾತನಾಡಿದರು.
ಭ್ರಷ್ಟರಿಗೆ ರಾಜಕೀಯ ರಕ್ಷಣೆ|
ಸಾಮಾಜಿಕ ನ್ಯಾಯಕ್ಕೆ ಮಾರಕವಾಗಿರುವ ಮತ್ತು ಸಾರ್ವಜನಿಕರ ಹಣವನ್ನು ಕೊಳ್ಳೆ ಹೊಡೆದಿರುವ ಭ್ರಷ್ಟರಿಗೆ ರಾಜಕೀಯ ರಕ್ಷಣೆ ನೀಡುತ್ತಿರುವ ಕಾಂಗ್ರೆಸ್ ಸರ್ಕಾರದ ನಡೆಯನ್ನು ಬಿ.ವೈ.ರಾಘವೇಂದ್ರ ತೀವ್ರವಾಗಿ ಖಂಡಿಸಿದರು.



ವಾಲ್ಮೀಕಿ ನಿಗಮದ ಅಕ್ರಮದ ಬಗ್ಗೆ ಪಾರದರ್ಶಕ ತನಿಖೆಯಾಗಿ, ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಯಾಗುವವರೆಗೆ ಮತ್ತು ಭ್ರಷ್ಟ ಸಚಿವ ನಾಗೇಂದ್ರ ವಜಾ ಆಗುವತನಕ ಹೋರಾಟ ಮುಂದುವರಿಯಲಿದೆ ಎಂದು ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಎಚ್ಚರಿಕೆ ನೀಡಿದರು.
ಅಹೋರಾತ್ರಿ ಧರಣಿ|
ಶಿವಮೊಗ್ಗದ ಡಿಸಿ ಕಚೇರಿ ಮುಂಭಾಗ ಸೋಮವಾರದಿಂದ ಜಿಲ್ಲಾ ಬಿಜೆಪಿ ವತಿಯಿಂದ ಹಮ್ಮಿಕೊಂಡಿರುವ ಧರಣಿ ಸತ್ಯಾಗ್ರಹವು ಅಹೋರಾತ್ರಿ ನಡೆಯಿತು.
ರಾತ್ರಿಯಿಡಿ ಜಾಗರಣೆ ಮಾಡಿದ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಭಜನೆ ಮಾಡಿದರು. ಇದೇ ವೇಳೆ ಮಧ್ಯ ರಾತ್ರಿ ಸಹ ಸಚಿವ ನಾಗೇಂದ್ರ ಅವರ ವಿರುದ್ದ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಲಾಯಿತು.
ವಿಧಾನಪರಿಷತ್ ಮಾಜಿ ಸದಸ್ಯ ಆರ್.ಕೆ.ಸಿದ್ದರಾಮಣ್ಣ, ಎಸ್ ದತ್ತಾತ್ರಿ, ಜಿಲ್ಲಾ ಅಧ್ಯಕ್ಷ ಜಗದೀಶ್, ಮೋಹನ್ ರೆಡ್ಡಿ, ಮಹಿಳಾ ಮೋರ್ಚಾ, ಯುವಮೋರ್ಚಾ ಮುಖಂಡರು ಕಾರ್ಯಕರ್ತರು ಭಾಗವಹಿಸಿದ್ದರು.
ಸೌಮ್ಯ ರೆಡ್ಡಿ
ಬ್ಯುರೋ ಚೀಫ್
ನ್ಯೂಇಂಡಿಯಾ ಕನ್ನಡ
ಶಿವಮೊಗ್ಗ







