ಶಿವಮೊಗ್ಗದಲ್ಲಿ ಚಲಾವಣೆಯಾಗಿದ್ದ ಎರಡು ಲಕ್ಷ ನಕಲಿ ನೋಟುಗಳು|ಖೋಟಾ ನೋಟು ಖದೀಮರಿಗೆ 3ವರುಷ ಶಿಕ್ಷೆ ಪ್ರಕಟ|ತುಂಗಾನಗರ ವ್ಯಾಪ್ತಿಯಲ್ಲಿ ನಡೆದಿದ್ದ ಘಟನೆ
2018ರ ಫೆ. 7ರಂದು ತುಂಗಾನಗರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಖೋಟಾನೋಟನ್ನು ಚಲಾವಣೆ ಮಾಡಲು ಟಿಪ್ಪುನಗರದ ಅಮ್ಜದ್ ಪಾಷಾ ಮತ್ತು ಮೊಹಿಸಿನ್ ಖಾನ್ ನೇತಾಜಿ ಸರ್ಕಲ್ ನಿಂದ ಅನುಪಿನಕಟ್ಟೆಯ ಕಡೆ ತೆರಳುತ್ತಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ದೊರಕಿದೆ.

ಶಿವಮೊಗ್ಗ: ಖೋಟಾ ನೋಟು ಸಾಗಾಟ ಮಾಡುತ್ತಿದ್ದ ಆರೋಪ ಎದುರಿಸುತ್ತಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೇ ಇಬ್ಬರು ಅಪರಾಧಿಗಳಿಗೆ ಶಿವಮೊಗ್ಗದ 3 ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು 3 ವರುಷ ಕಠಿಣ ಶಿಕ್ಷೆ ಮತ್ತು 52,000 ರೂ ದಂಡವನ್ನು ವಿಧಿಸಿ ಆದೇಶ ಹೊರಡಿಸಿದೆ.
ಗೋಪಾಳದಲ್ಲಿ ಸಿಕ್ಕಿಬಿದ್ದಿದ್ದ ಆರೋಪಿಗಳು|

2018ರ ಫೆ. 7ರಂದು ತುಂಗಾನಗರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಖೋಟಾನೋಟನ್ನು ಚಲಾವಣೆ ಮಾಡಲು ಟಿಪ್ಪುನಗರದ ಅಮ್ಜದ್ ಪಾಷಾ ಮತ್ತು ಮೊಹಿಸಿನ್ ಖಾನ್ ನೇತಾಜಿ ಸರ್ಕಲ್ ನಿಂದ ಅನುಪಿನಕಟ್ಟೆಯ ಕಡೆ ತೆರಳುತ್ತಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ದೊರಕಿದೆ.

ಈ ಹಿನ್ನೆಲೆಯಲ್ಲಿ ಅಂದಿನ ಸಿಪಿಐ ಆರ್.ವಿ ಗಂಗಾಧರಪ್ಪ ತಮ್ಮ ಸಿಬ್ಬಂದಿ ಹಾಗೂ ಪಂಚರೊಂದಿಗೆ ಗೋಪಾಳ ಖಾಸಗಿ ಬಸ್ ಸ್ಟ್ಯಾಂಡ್ ಹತ್ತಿರ ಕಾದು ನಿಂತಿದ್ದರು.
ಈ ಸಂದರ್ಭದಲ್ಲಿ ಬೈಕಿನಲ್ಲಿ ಬಂದ ಆರೋಪಿಗಳನ್ನು ಅಡ್ಡಗಟ್ಟಿ ನಿಲ್ಲಿಸಿ ವಶಕ್ಕೆ ಪಡೆಯಲಾಗಿತ್ತು.
ಆರೋಪಿಗಳನ್ನು ತಪಾಸಣೆ ಮಾಡಿದಾಗ 500 ರೂ.ಗಳ ಮುಖ ಬೆಲೆಯ 95 ನೋಟುಗಳು ಮತ್ತು ಇನ್ನೋರ್ವ ಆರೋಪಿಯಿಂದ 500 ರೂ.ಗಳ ಮುಖ ಬೆಲೆಯ 167 ನೋಟುಗಳು ಪತ್ತೆಯಾಗಿದ್ದವು.
ಇನ್ನು ಮೂರನೆಯ ಆರೋಪಿ ತೌಸಿಫ್, ಆತನ ಸ್ನೇಹಿತನಾದ ನಾಲ್ಕನೆಯ ಆರೋಪಿ ಸೈಯದ್ ಇರ್ಪಾನ್ನೊಂದಿಗೆ ಸೇರಿ ಪಶ್ಚಿಮ ಬಂಗಾಳಕ್ಕೆ ಅಮ್ಜದ್ ಪಾಷಾ ಈತನನ್ನು ಕರೆದುಕೊಂಡು ಹೋಗಿ 500 ರೂ. ಮುಖ ಬೆಲೆಯ 2 ಲಕ್ಷ ರೂ. ಖೋಟಾ ನೋಟುಗಳನ್ನು 70 ಸಾವಿರ ರೂ.ಗಳು ಅಸಲು ನೋಟುಗಳನ್ನು ಪಾವತಿಸಿ ತಂದಿದ್ದಾಗಿ ಒಪ್ಪಿಕೊಂಡಿದ್ದನು.
ಈ ಖೋಟಾ ನೋಟುಗಳನ್ನು ಶಿವಮೊಗ್ಗ, ಭದ್ರಾವತಿ ಹಾಗೂ ಇತರೆಡೆ ಚಲಾವಣೆ ಮಾಡಿರುವುದಾಗಿ ತಿಳಿಸಿದ್ದರು.
ಪ್ರಕರಣ ದಾಖಲಿಸಿಕೊಂಡಿದ್ದ ಆಗಿನ ತನಿಖಾಧಿಕಾರಿ ಸಿಪಿಐ ಆರ್.ವಿ ಗಂಗಾಧರಪ್ಪ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು.
ಆರೋಪ ದೃಢಪಟ್ಟ ಹಿನ್ನೆಲೆಯಲ್ಲಿ ಶಿವಮೊಗ್ಗದ 3 ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಯಶವಂತ ಕುಮಾರ್ ರವರು ಮಂಗಳವಾರದಂದು ಆರೋಪಿತರಿಗೆ ಶಿಕ್ಷೆ ಹಾಗೂ ದಂಡ ವಿಧಿಸಿದ್ದಾರೆ.
ವರದಿ: ಸೌಮ್ಯ ರೆಡ್ಡಿ
ಬ್ಯುರೋ ಚೀಫ್
ನ್ಯೂಇಂಡಿಯಾ ಕನ್ನಡ
ಶಿವಮೊಗ್ಗ.







