ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಶಾಲಾ ಮಕ್ಕಳ ಕಲರವ|ಕಾನೂನು ಪಾಲನೆ ಬಗ್ಗೆ ಎಸ್ಪಿ ಬಿ.ನಿಖಿಲ್ ನೀತಿಪಾಠ|”ತೆರೆದ ಮನೆ” ಹೆಸರಿನಲ್ಲಿ ವಿನೂತನ ಕಾರ್ಯಕ್ರಮ
ಮಕ್ಕಳಲ್ಲಿರುವ ಎಲ್ಲ ಗೊಂದಲ ಅನುಮಾನ ಮತ್ತು ಪ್ರಶ್ನೆಗಳಿಗೆ ಶಾಲಾ ಶಿಕ್ಷಕರಂತೆ ಎಸ್ಪಿ ಬಿ.ನಿಖಿಲ್ ಉತ್ತರಿಸಿದರು. ಮಕ್ಕಳ ಅಹವಾಲುಗಳನ್ನು ಸಂಯಮದಿಂದ ಆಲಿಸಿದ ಅವರು ಮಕ್ಕಳ ವಿಶ್ವಾಸಕ್ಕೆ ಇನ್ನಷ್ಟು ಹತ್ತಿರವಾದರು.
ಶಿವಮೊಗ್ಗ: ಕಾನೂನು ಉಲ್ಲಂಘನೆ, ಅಪರಾಧ ಪ್ರಕರಣಗಳಲ್ಲಿ ಹದಿ ಹರೆಯದ ಮಕ್ಕಳು ಹೆಚ್ಚಾಗಿ ಭಾಗಿಯಾಗುತ್ತಿರುವ ಈಸಂದರ್ಭದಲ್ಲಿ ಅವರಲ್ಲಿಯು ಕಾನೂನು ಪಾಲನೆ, ಪೋಲೀಸ್ ವ್ಯವಸ್ಥೆ, ಕುರಿತು ಪ್ರಾಯೋಗಿಕವಾಗಿ ತಿಳಿಯುವ ಅವಕಾಶವನ್ನು ಶಿವಮೊಗ್ಗ ಜಿಲ್ಲಾ ಪೊಲೀಸ್ ವತಿಯಿಂದ ವಿಭಿನ್ನ ಪ್ರಯತ್ನಕ್ಕೆ ಮುಂದಾಗಿದೆ.

ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಬುಧವಾರದಂದು ಶಾಲಾ ಮಕ್ಕಳ ಕಲರವ. ಬೇರೆ ಕೆಲಸಕ್ಕೆ ಠಾಣೆಗೆ ಬಂದಿದ್ದ ಜನರಿಗೆ ನೂರಾರು ಮಕ್ಕಳ್ಯಾಕೆ ಅದು ಶಾಲಾ ಯುನಿಫಾರ್ಮನಲ್ಲಿ ಇಲ್ಲ್ಯಾಕೆ ಬಂದಿದ್ದಾರೆ ಎಂದು ಕ್ಷಣಕಾಲ ಚಿಂತೇಗೀಡು ಮಾಡಿತ್ತು.

ಇನ್ನು ಠಾಣೆಯ ಹೊರಗಡೆ ರೈಫಲ್ಗಳು, ಪಿಸ್ತೂಲುಗಳನ್ನು ಜೋಡಿಸಿಟ್ಟಿದ್ದು, ಅದರ ಮುಂದೆ ಪೊಲೀಸರು ಠಳಾಯಿಸಿದ್ದು, ಕೆಲ ಕಾಲ ನೋಡುಗರಿಗೆ ವಿಚಿತ್ರ ಅನುಭವ ಮೂಡಿಸುವಂತೆ ಮಾಡಿತ್ತು.
ಆದರೆ ಇದು ‘ತೆರೆದ ಮನೆ’ ಹೆಸರಿನಡಿ ಸಮುದಾಯದಲ್ಲಿ ನಂಬಿಕೆ ಮೂಡಿಸಲು ಮತ್ತು ಯುವ ಪೀಳಿಗೆಗೆ ಜಾಗೃತಿ ಮೂಡಿಸಲೆಂದೆ ಏರ್ಪಡಿಸಿದ್ದ ಕಾರ್ಯಕ್ರಮ ಎಂದು ತಿಳಿಯಲು ತಡವಾಗಲಿಲ್ಲ.

ಯಾಕೆಂದರೇ ಅಷ್ಟೊತ್ತಿಗಾಗಲೇ ಎಸ್ಪಿ ಬಿ.ನಿಖಿಲ್ ಮಕ್ಕಳೊಂದಿಗೆ ಬೆರೆತು ಅವರೆಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದರು.
ಠಾಣೆಯಲ್ಲಿ ಶಿಕ್ಷಕರಾದ ಬಿ.ನಿಖಿಲ್|
ಮಕ್ಕಳಿಗೆ ನೀತಿ ಪಾಠ ಮಾಡಿದ ಎಸ್ಪಿ|
‘ತೆರೆದ ಮನೆ’ ಹೆಸರಿನಡಿ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಆದಿಚುಂಚನಗಿರಿ ಶಾಲೆಯ ನೂರಾರು ಹೈಸ್ಕೂಲ್ ಮಕ್ಕಳ ಜೊತೆ ಎಸ್ಪಿ ಬಿ. ನಿಖಿಲ್ ಸಂವಾದ ನಡೆಸಿದರು.

ಮಕ್ಕಳಲ್ಲಿರುವ ಎಲ್ಲ ಗೊಂದಲ ಅನುಮಾನ ಮತ್ತು ಪ್ರಶ್ನೆಗಳಿಗೆ ಶಾಲಾ ಶಿಕ್ಷಕರಂತೆ ಎಸ್ಪಿ ಬಿ.ನಿಖಿಲ್ ಉತ್ತರಿಸಿದರು. ಮಕ್ಕಳ ಅಹವಾಲುಗಳನ್ನು ಸಂಯಮದಿಂದ ಆಲಿಸಿದ ಅವರು ಮಕ್ಕಳ ವಿಶ್ವಾಸಕ್ಕೆ ಇನ್ನಷ್ಟು ಹತ್ತಿರವಾದರು.
ಪೊಲೀಸರೇಂದರೇ ಭಯ ಆವರಿಸುವ ಈ ಸಂದರ್ಭದಲ್ಲಿ ಎಸ್ಪಿ ಬಿ.ನಿಖಿಲ್ ಅವರು ಸಂಯಮದಿಂದ ನಡೆದುಕೊಂಡ ರೀತಿ ಮಕ್ಕಳಲ್ಲಿ ಇನ್ನಷ್ಟು ಮಾಹಿತಿ ಪಡೆಯಲು ಪ್ರೇರೆಪಿಸುವಂತೇ ಮಾಡಿತು.
ಎಸ್ಪಿ ಬಿ.ನಿಖಿಲ್,ಮಕ್ಕಳಿಗೆ ನೀಡಿದ ಸಲಹೆಗಳು|

- ಕಾನೂನು ಪಾಲನೆ ಮಹತ್ವದ ಕುರಿತು ಮನವರಿಕೆ
- ಮಕ್ಕಳು ಮಾದಕವಸ್ತುಗಳಿಂದ ದೂರವಿರಲು ಸಲಹೆ
- ನಾಗರಿಕ ನಿಯಮಗಳು ಮತ್ತು ರಸ್ತೆ ಸುರಕ್ಷತೆಯ ಪಾಠ ಮಾಡಿದರು
- 18 ವರ್ಷದೊಳಗಿನ ಮಕ್ಕಳು ವಾಹನ ಚಾಲನೆ ಕಾನೂನುಬಾಹಿರ ಮತ್ತು ಶಿಕ್ಷಾರ್ಹ ಅಪರಾಧದ ಅರಿವು ಸೇರಿದಂತೆ ಪೊಲೀಸ್ ಇಲಾಖೆಯ “ಬೇಡ ಬ್ರೋ” (Beda Bro) ಅಭಿಯಾನದ ಬಗ್ಗೆ ಅವರು ಮಾಹಿತಿ ನೀಡಿದರು.
ರೈಫಲ್ಸ್, ಪಿಸ್ತೂಲ್ಗಳ ಪ್ರದರ್ಶನ|
ಆಯುಧಗಳ ಪಾತ್ರ ಮತ್ತು ಪರಿಚಯ|




ಇನ್ನು ಪೊಲೀಸ್ ಇಲಾಖೆಯ ಕುರಿತಾದ ಭಯ ಮತ್ತು ಗೊಂದಲಗಳನ್ನು ನಿವಾರಿಸಲು, ಜಿಲ್ಲಾ ಶಸ್ತ್ರಾಗಾರದಿಂದ ತರಲಾಗಿದ್ದ ರೈಫಲ್ಸ್, ಪಿಸ್ತೂಲ್ ಸೇರಿದಂತೆ ವಿವಿಧ ಆಯುಧಗಳ ಪ್ರದರ್ಶನ ಏರ್ಪಡಿಸಲಾಗಿತ್ತು.

ಈ ಕುರಿತು ಸಾರ್ವಜನಿಕ ಸುರಕ್ಷತೆಯಲ್ಲಿ ಇವುಗಳ ಪಾತ್ರವೇನು ಎಂಬುದನ್ನು ಅಧಿಕಾರಿಗಳು ವಿಶೇಷ ತರಗತಿಯ ಮೂಲಕ ಮಕ್ಕಳಿಗೆ ವಿವರಿಸಿದ್ದು ವಿಶೇಷವಾಗಿತ್ತು.
ದೊಡ್ಡಪೇಟೆ ಠಾಣೆ ಸುತ್ತಾಡಿದ ಮಕ್ಕಳು|
ವಿಶೇಷ ಪ್ರಾತ್ಯಕ್ಷಿಕೆ, ರೈಫಲ್ಸ್, ಪಿಸ್ತೂಲ್ ಪ್ರದರ್ಶನ, ಖುದ್ದು ಎಸ್ಪಿ ಬಿ.ನಿಖಿಲ್ ಅವರಿಂದ ಉಪಯುಕ್ತ ಮಾಹಿತಿ ಪಡೆದ ಶಾಲಾ ಮಕ್ಕಳು, ದೊಡ್ಡಪೇಟೆ ಪೊಲೀಸ್ ಠಾಣೆಯ ಒಳಗೆಲ್ಲಾ ಸುತ್ತಾಡಿದರು.

ಅಲ್ಲಿನ ಕೆಲಸದ ವಾತಾವರಣ, ಸಿಬ್ಬಂದಿಯ ಕಾರ್ಯವೈಖರಿ ಮತ್ತು ದೈನಂದಿನ ಚಟುವಟಿಕೆಗಳನ್ನು ವೀಕ್ಷಿಸಿದರು. ಕಾನೂನು ಪಾಲನೆ ಹಾಗೂ ನಾಗರಿಕ ಜವಾಬ್ದಾರಿಯ ಬಗ್ಗೆ ಪ್ರತ್ಯಕ್ಷ ಜ್ಞಾನ ಪಡೆದುಕೊಂಡರು.

ಪೊಲೀಸ್ ಠಾಣೆಯೆಂದರೆ ಅಪರಾಧಿಗಳಿಗೆ ಮಾತ್ರ ಸಂಭಂಧಿಸಿದ್ದು ಎಂಬ ಕಲ್ಪನೆಯಲ್ಲಿದ್ದ ಮಕ್ಕಳಲ್ಲಿ ಪೊಲೀಸರ ಕರ್ತವ್ಯ, ಅವರ ಸಾಮಾಜಿಕ ಜವಾಬ್ದಾರಿ ಬಗ್ಗೆ ತಿಳಿಯುವ ಅವಕಾಶ ಮಕ್ಕಳಿಗೆ ತೆರೆದ ಮನೆ ಕಾರ್ಯಕ್ರಮದ ಮೂಲಕ ಸಿಕ್ಕಿದ್ದು ವಿಶೇಷವಾಗಿತ್ತು.
ಹಿರಿಯ ಪೊಲೀಸ್ ಅಧಿಕಾರಿಗಳು, ಆದಿಚುಂಚನಗಿರಿ ಶಾಲೆಯ ಶಿಕ್ಷಕರು, ದೊಡ್ಡಪೇಟೆ ಪೊಲೀಸ್ ಇನ್ಸ್ಪೆಕ್ಟರ್ ಸತ್ಯನಾರಾಯಣ್ ಮತ್ತು ಠಾಣೆಯ ಸಿಬ್ಬಂದಿ ಉಪಸ್ಥಿತರಿದ್ದರು.
ವರದಿ: ಸೌಮ್ಯ ರೆಡ್ಡಿ
ಬ್ಯುರೋ ಚೀಫ್
ನ್ಯೂಇಂಡಿಯಾ ಕನ್ನಡ
ಶಿವಮೊಗ್ಗ.







