KarnatakaShivamoggaSpecial Stories

ಆನವಟ್ಟಿಯಿಂದ ಶಿಕಾರಿಪುರಕ್ಕೆ ಬಸ್‌ ಅವ್ಯವಸ್ಥೆ|ತೊಂದರೆಗೀಡಾದ ವಿದ್ಯಾರ್ಥಿಗಳಿಂದ ಮಧು ಬಂಗಾರಪ್ಪಗೆ ದೂರು|ಮಾಜಿ ಸಚಿವರ ಸೂಚನೆಯಂತೆ ಹೊಸ ಬಸ್‌ ಆರಂಭ..

ತಮ್ಮದೇ ಕ್ಷೇತ್ರದ ಬಸ್‌ ಸಮಸ್ಯೆ ಬಗ್ಗೆ ವಿದ್ಯಾರ್ಥಿಗಳು ನೀಡಿದ ದೂರು ಕೈ ಸೇರುತ್ತಿದ್ದಂತೆ ತಡ ಮಾಡದ ಮಾಜಿ ಸಚಿವ ಮಧು ಬಂಗಾರಪ್ಪ ಕೂಡಲೇ ಕೆಎಸ್‌ಆರ್‌ಟಿಸಿ ಉನ್ನತ ಅಧಿಕಾರಿಗಳನ್ನು ಸಂಪರ್ಕಿಸಿದ್ದಾರೆ.

ಶಿವಮೊಗ್ಗ/ಆನವಟ್ಟಿ: ಸರಿಯಾದ ಬಸ್‌ ವ್ಯವಸ್ಥೆ ಇಲ್ಲದೆ ಕಾಲೇಜಿಗೆ ಹೋಗಲು ಪರದಾಡುತ್ತಿದ್ದ ವಿದ್ಯಾರ್ಥಿಗಳ ಪಾಲಿಗೆ ಮಾಜಿ ಸಚಿವ ಮಧು ಬಂಗಾರಪ್ಪ ಅಪದ್ಭಾಂಧವರಂತೆ ಬಂದು ಸಹಾಯ ಮಾಡಿದ್ದಾರೆ.

ಕಾಲೇಜಿಗೆ ತೆರಳಲು ಬಸ್‌ಗಾಗಿ ಹಾಗೂ ಇದ್ದ ಒಂದು ಬಸ್‌ನಲ್ಲಿನ ನೂಕುನುಗ್ಗಲಿನಿಂದ ಹೈರಾಣಾಗಿದ್ದ ವಿದ್ಯಾರ್ಥಿಗಳ ಮುಖದಲ್ಲಿ ಈಗ ಮಂದಹಾಸ ಹಾಗೂ ನಿರಾಳತೆ ಮೂಡಿದೆ.

ಸೊರಬದ ಆನವಟ್ಟಿಯಿಂದ ಶಿಕಾರಿಪುರ ಪಟ್ಟಣದಲ್ಲಿರುವ ಕಾಲೇಜುಗಳಿಗೆ ಪ್ರತಿದಿನ ನೂರಾರು ವಿದಾರ್ಥಿಗಳು ಪ್ರಯಾಣ ಮಾಡುತ್ತಾರೆ.

ಆದರೆ ಬೆಳಿಗ್ಗೆ 7.30 ರಿಂದ 8.30 ರವರೆಗೆ ಕೆಎಸ್‌ಆರ್‌ಟಿಸಿ ವತಿಯಿಂದ ಯಾವುದೇ ಬಸ್‌ ಇರದ ಕಾರಣ ಸಮಯಕ್ಕೆ ಸರಿಯಾಗಿ ಕಾಲೇಜಿಗೆ ತಲುಪಲಾಗದೇ ಕಷ್ಟಪಡುತ್ತಿದ್ದರು.

ಇನ್ನು ಇದ್ದ ಏಕೈಕ ಬಸ್ ಧರ್ಮಸ್ಥಳದಿಂದ ಬರುತ್ತಿತ್ತು.

ಆದರೆ ಇಡೀ ಬಸ್‌ ಸಂಪೂರ್ಣ ತುಂಬಕೊಂಡೆ ಬರುತ್ತಿದ್ದರಿಂದ ವಿದ್ಯಾರ್ಥಿಗಳು ಸ್ಥಳವೇ ಇಲ್ಲದೇ ನೂಕು ನುಗ್ಗಲಿನಲ್ಲಿಯೇ ಶಿಕಾರಿಪುರ ತಲಪುವ ಪರಿಸ್ಥಿತಿ ಇತ್ತು.

ಇದರಿಂದ ತೀವ್ರ ತೊಂದರೆ ಆಗುತ್ತಿರುವ ಬಗ್ಗೆ ಈವರೆಗೆ ಯಾರೂ ಈ ಬಗ್ಗೆ ಚಕಾರ ಎತ್ತದೇ ಸಹಿಸಿಕೊಂಡು ಬಂದಿದ್ದರು.

ಆದರೆ ದಿನವೂ ತಾನು ಸೇರಿದಂತೆ ಉಳಿದ ವಿದ್ಯಾರ್ಥಿಗಳು ಅನುಭವಿಸುತ್ತಿದ್ದ ಸಮಸ್ಯೆಯನ್ನು ಸಾಬಾರ ಗ್ರಾಮದ ಶರತ್‌ ಎಂ. ಎಂಬ ಬಿಸಿಎ ವಿದ್ಯಾರ್ಥಿಯು ಮಾಜಿ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರಿಗೆ ದೂರು ಬರೆದಿದ್ದಾನೆ.

ಈ ದೂರಿನ ಪತ್ರಕ್ಕೆ ಹಲವಾರು ವಿದ್ಯಾರ್ಥಿಗಳು ಸಹ ಸಹಿ ಮಾಡಿದ್ದಾರೆ.

ಬೆಳಗ್ಗೆ 8ರಿಂದ 8.30ರ ಸಮಯದಲ್ಲಿ ಪ್ರತ್ಯೇಕ ಬಸ್‌ ಒಂದನ್ನು ಮಂಜೂರು ಮಾಡಿಸಬೇಕೆಂದು ಪತ್ರದ ಮೂಲಕ ಮನವಿ ಮಾಡಿದ್ದಾನೆ.

ತಮ್ಮದೇ ಕ್ಷೇತ್ರದ ಬಸ್‌ ಸಮಸ್ಯೆ ಬಗ್ಗೆ ವಿದ್ಯಾರ್ಥಿಗಳು ನೀಡಿದ ದೂರು ಕೈ ಸೇರುತ್ತಿದ್ದಂತೆ ತಡ ಮಾಡದ ಮಾಜಿ ಸಚಿವ ಮಧು ಬಂಗಾರಪ್ಪ ಕೂಡಲೇ ಕೆಎಸ್‌ಆರ್‌ಟಿಸಿ ಉನ್ನತ ಅಧಿಕಾರಿಗಳನ್ನು ಸಂಪರ್ಕಿಸಿದ್ದಾರೆ.

ವಿದ್ಯಾರ್ಥಿಗಳ ಅಪೇಕ್ಷೆಯಂತೆ ನೂತನವಾಗಿ ಬಸ್‌ ಅನ್ನು ಮಂಜೂರು ಮಾಡುವಂತೆ ಸೂಚಿಸಿದ್ದಾರೆ.

ಮಾಜಿ ಸಚಿವ ಮಧು ಬಂಗಾರಪ್ಪ ಅವರ ಸೂಚನೆಯಂತೇ ಈಗ ಆನವಟ್ಟಿಯಿಂದ ಶಿಕಾರಿಪುರಕ್ಕೆ ತೆರಳಲು ಹೊಸ ಬಸ್‌ ಮಂಜೂರು ಆಗಿದೆ.

ಈಗ ಇದೇ ಹೊಸ ಬಸ್‌ನಲ್ಲಿ ಆನವಟ್ಟಿ ಸುತ್ತಮುತ್ತ ಭಾಗದ ವಿದ್ಯಾರ್ಥಿಗಳು ಪ್ರಯಾಣ ಮಾಡುತ್ತಿದ್ದಾರೆ. ಇಡೀ ಬಸ್‌ನಲ್ಲಿ ಈಗ ವಿದ್ಯಾರ್ಥಿಗಳದ್ದೇ ಕಲರವ.

ಮೊದಲಿದ್ದ ನೂಕು ನುಗ್ಗಲು ಇಲ್ಲದರಿಂದ ವಿದ್ಯಾರ್ಥಿಗಳು ಆರಾಮವಾಗಿ ಶಿಕಾರಿಪುರಕ್ಕೆ ಪ್ರಯಾಣ ಮಾಡುವಂತಾಗಿದೆ.

ಇದರಿಂದ ಸಂತಸಗೊಂಡಿರುವ ವಿದ್ಯಾರ್ಥಿಗಳ ಮುಖದಲ್ಲಿ ಮಂದಹಾಸ ಮೂಡಿದ್ದಲ್ಲದೇ, ಬಸ್‌ ಅನುಕೂಲ ಮಾಡಿಕೊಟ್ಟ ಮಾಜಿ ಸಚಿವ ಮಧು ಬಂಗಾರಪ್ಪ ಅವರಿಗೆ ವಿದ್ಯಾರ್ಥಿಗಳು ಹಾಗೂ ಅವರ ಪೋಷಕರು ಮನಃಪೂರ್ವಕ ಕೃತಜ್ಞತೆಯನ್ನು ಸಲ್ಲಿಸಿದ್ದಾರೆ.

Follow Us

Leave a Reply

Your email address will not be published. Required fields are marked *

Back to top button